ನನ್ನ ತಂದೆಯ ಆಸೆಯಂತೆ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ನಾನೆಂದಿಗೂ ವಂಶ ರಾಜಕಾರಣ ಮಾಡುವುದಿಲ್ಲ. ನನ್ನ ತಲೆಮಾರಿಗೆ ನನ್ನ ರಾಜಕೀಯ ಅಂತ್ಯವಾಗಲಿದೆ ಎಂದು ಯುವನಾಯಕ ಇಂಡುವಾಳು ಸಚ್ಚಿದಾನಂದ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಗ್ರಾಮದಲ್ಲಿ ಶ್ರೀ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಸೇವಾ ಮನೋಭಾವದ ರಾಜಕಾರಣದಲ್ಲಿ ನಂಬಿಕೆಯಿಟ್ಟಿದ್ದೇನೆ. ಎಂದಿಗೂ ಕುಟುಂಬ ರಾಜಕಾರಣ ಮಾಡಲ್ಲ. ಹುಟ್ಟಿದ ಮೇಲೆ ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡಬೇಕೆಂಬ ಆಸೆ ನನ್ನದಾಗಿದ್ದು,ಜನರ ಆಶಯದಂತೆ ಜನಪರ ಸೇವಾಕಾರ್ಯ ಮುಂದುವರೆಸುತ್ತೇನೆ ಎಂದರು.
ನನ್ನ ತಂದೆ ಒಬ್ಬ ರೈತನಾಗಿದ್ದು ಅವರಿಗೆ ನಾನು ರಾಜಕೀಯ ಸೇರಿ ಜನಸೇವೆ ಮಾಡಬೇಕೆಂಬ ಹಂಬಲವಿತ್ತು. ಅವರ ಆಸೆಯಂತೆ,ಅವರ ಹೆಸರಿನಲ್ಲಿ ಶಂಕರೇಗೌಡ ಟ್ರಸ್ಟ್ ಸ್ಥಾಪಿಸಿ ಸಾಕಷ್ಟು ಜನಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ.
ನಾನೆಂದಿಗೂ ಜನರಿಂದ ದೂರವಾಗುವುದಿಲ್ಲ.ನನ್ನ ನಂಬಿರುವ ಜನರ ಪರವಾಗಿ ನನ್ನ ಉಸಿರು ಅಂತ್ಯವಾಗುವವರೆಗೂ ಇರುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿವಿಧ ವೃತ್ತಿ ಕಾರ್ಯಕರ್ತರಿಗೆ ಟ್ರಸ್ಟ್ ವತಿಯಿಂದ ಗೌರವ ಸಲ್ಲಿಸಲಾಯಿತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೀರೆ, ಪೌರಕಾರ್ಮಿಕರು, ಆಟೋ ಚಾಲಕರಿಗೆ ಸಚ್ಚಿದಾನಂದ ಸಮವಸ್ತ್ರ ವಿತರಿಸಿದರು.
ಕಸಬಾ ಹೋಬಳಿ ವ್ಯಾಪ್ತಿಯ ಸವಿತಾ ಸಮಾಜದ ಸದಸ್ಯರು ಹಾಗೂ ಗ್ರಾಮ ಪಂಚಾಯತಿಯ ವಾಟರ್ ಮೆನ್ ಗಳಿಗೆ ಬಟ್ಟೆ ವಿತರಿಸಿದರು. ನೀರು ಶೇಕರಿಸಿಡುವ 25ಲೀಟರ್ ಕ್ಯಾನ್ ಗಳನ್ನು ಮೇಳಾಪುರ ಗ್ರಾಮದ ಪ್ರತಿ ಮನೆಗೂ ವಿತರಿಸಿದರು.
ಈ ಸಂಧರ್ಭದಲ್ಲಿ ಮಾಜಿ ತಾ.ಪಂ.ಅಧ್ಯಕ್ಷ ಶ್ರೀಧರ್, ಹೊಸೂರು ಗ್ರಾ.ಪಂ ಸದಸ್ಯರಾದ ಧನರಾಜು, ಮಹದೇವಪುರ ಗ್ರಾ.ಪಂ ಸದಸ್ಯ ಶಶಿಧರ್, ಮೇಳಾಪುರ ಗ್ರಾ.ಪಂ ಸದಸ್ಯ ಬೆಟ್ಟೇಗೌಡ, ಚಿಕ್ಕಂಕನಹಳ್ಳಿ ಗ್ರಾ.ಪಂ ಸದಸ್ಯ ಕೃಷ್ಣ, ಆನಂದ್, ಚಂದಗಾಲು ಗ್ರಾ.ಪಂ ಸದಸ್ಯ ಶಿವಕುಮಾರ್, ಬಿದರಹಳ್ಳಿಹುಂಡಿ ಗ್ರಾ.ಪಂ ಸದಸ್ಯ ನಂಜುಂಡಸ್ವಾಮಿ, ಬೇಬಿನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹೇಶ್, ಹುರಳಿ ಕ್ಯಾತನಹಳ್ಳಿ ರೇವಣ್ಣ, ಹೊಸೂರು ವಿರೂಪಾಕ್ಷ, ಕಬ್ಬನಹಳ್ಳಿ ರಾಮಚಂದ್ರು, ಬಾಬುರಾಯನಕೊಪ್ಪಲು ದೇವರಾಜು, ಬಿಜೆಪಿ ಮುಖಂಡ ಅನಿಲ್ ಸೇರಿದಂತೆ ಹಲವರಿದ್ದರು.