ವಿದ್ಯುತ್ ತಂತಿ ( ಲೈನ್) ಉರುಳಿ ಸುಮಾರು 4 ಏಕರೆಗಿಂತ ಹೆಚ್ಚು ಕಟಾವಿಗೆ ಬಂದ ಕಬ್ಬು ನಾಶವಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಸಮೀಪದ ಕಳ್ಳಿಮೆಳ್ಳೆದೊಡ್ಡಿ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಕಳ್ಳಿಮೆಳ್ಳೆದೊಡ್ಡಿ ಗ್ರಾಮದ ಶಿಂಷಾ ನದಿಯ ಪಕ್ಕದ ಜೋಗಿ ಸಿದ್ದೇಗೌಡ ಎಂಬುವವರ 2 ಎಕರೆ, ಹನುಮಯ್ಯ ಅವರಿಗೆ ಸೇರಿದ 1 ಎಕರೆ ಹಾಗೂ ಮರಿಸಿದ್ದೇಗೌಡ ಅವರಿಗೆ ಸೇರಿದ 1 ಎಕರೆಯ ಜಮೀನನಲ್ಲಿ ಬೆಳೆದಿದ್ದ ಕಬ್ಬಿಗೆ ವಿದ್ಯುತ್ ತಂತಿ (ಲೈನ್) ಕಡಿದು ಬಿದ್ದಿದ್ದರಿಂದ, ವಿದ್ಯುತ್ ಪ್ರವಹಿಸಿ ಕಬ್ಬಿನ ಬೆಳೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸುಮಾರು ಮಧ್ಯಾಹ್ನ 12.30 ರ ವೇಳೆಯಲ್ಲಿ ವಿದ್ಯುತ್ ತಂತಿ( ಲೈನ್) ತುಂಡಾಗಿ ಬಿದ್ದು ಅಗ್ನಿ ಸ್ಪರ್ಶವಾಗಿ, ಕಬ್ಬಿನ ಬೆಳೆ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ ಕೂಡಲೇ ಸ್ಥಳೀಯರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳಕ್ಕೆ ಕರೆ ಮಾಡಿದರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಬೆಂಕಿಯನ್ನು ಅರಿಸಲಾಗದೆ ಹಿಂತಿರುಗಿದರು.
ಹಳೆಯ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದರಿಂದ ರೈತರು ಕಷ್ಟಪಟ್ಟು ಬೆಳೆದು ಕಟಾವಿಗೆ ಬಂದಿದ್ದ ಕಬ್ಬು ಬೆಳೆ ಸಂಪೂರ್ಣವಾಗಿ ಭಸ್ಮವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಮದ್ದೂರು ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.