ದೇಶ ಕಾಯುತ್ತಿರುವ ಯೋಧರು ಹಾಗೂ ಬೆವರು ಹರಿಸಿ ದುಡಿಯುತ್ತಿರುವ ರೈತರ ಕಾಯಕ ಎಲ್ಲರಿಗೂ ಮಾದರಿಯಾಗಿದೆ ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಮಾತೃಭೂಮಿ ವೃದ್ಧಾಶ್ರಮದಲ್ಲಿ ವಿಶ್ರಾಂತ ಯೋಧರು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಭಾರತ ದೇಶದ ಗಡಿಯ ಒಳಗೆ ನುಗ್ಗಿ ದಾಂಧಲೆ ನಡೆಸಿ, ನಮ್ಮ ನೆಲವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಸೈನಿಕರನ್ನು ಭಾರತದ ವೀರಯೋಧರು ಹೊಡೆದೋಡಿಸಿ ನಮ್ಮ ನೆಲವನ್ನು ಮರಳಿ ಪಡೆದು ವಿಜಯವನ್ನು ಗಳಿಸಿದ ಈ ಶುಭದಿನವನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಗಡಿಯಲ್ಲಿ ನಿಂತು ಚಳಿ, ಮಳೆ, ಬಿಸಿಲೆನ್ನದೇ ದಿನದ 24 ಗಂಟೆಗಳ ಕಾಲವೂ ಭಾರತ ದೇಶದ ಗಡಿಯನ್ನು ಸಂರಕ್ಷಣೆ ಮಾಡುವ ಕಾಯಕವನ್ನು ಬದ್ಧತೆಯಿಂದ ಮಾಡುತ್ತಿರುವ ನಮ್ಮ ಸೈನಿಕರ ನಿಸ್ವಾರ್ಥ ಸೇವೆಯು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುಂಡ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಮಾತನಾಡಿ, ದೇಶವನ್ನು ಕಾಯುತ್ತಿರುವ ಯೋಧರ ನಿಸ್ವಾರ್ಥ ಕಾಯಕದಿಂದಾಗಿ ನಾವಿಂದು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಕರ್ತವ್ಯನಿರತ ಯೋಧರು ಸೇರಿದಂತೆ, ನಿವೃತ್ತ ಯೋಧರನ್ನು ಗೌರವಿಸುವುದು, ಅವರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್, ಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ಸುನಿಲ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಲೋಕೇಶ್, ಕೆ.ಆರ್.ಪೇಟೆ ತಾಲ್ಲೂಕು ನಯನ ಕ್ಷತ್ರಿಯ ಸಂಘದ ಅಧ್ಯಕ್ಷ ಕೆ.ಎಂ. ಶಿವಪ್ಪ, ಮಾತೃಭೂಮಿ ವೃದ್ಧಾಶ್ರಮದ ವ್ಯವಸ್ಥಾಪಕ ನಾಗಣ್ಣ, ವಿಶ್ರಾಂತ ಸೈನಿಕರಾದ ಕೆ ಆರ್ ಪೇಟೆ ಸುಕುಮಾರ್, ಪುರ ಲೋಕೇಶ್, ಕಿಕ್ಕೇರಿ ಬಿ.ಕೆ.ಲೋಕೇಶ್, ರಘುಚಾರಿ, ವಳಗೆರೆಮೆಣಸ ಗಿರೀಶ್, ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಸೇರಿದಂತೆ ನೂರಾರು ಜನರು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.