ಮಣಿಪುರ ರಾಜ್ಯದಲ್ಲಿ ರಾಜಕೀಯ ವ್ಯಕ್ತಿಗಳ ಕುಮ್ಮುಕ್ಕಿನಿಂದ ಮಹಿಳೆಯರ ಮೇಲೆ ಕಳೆದ 80 ದಿನಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ, ರಾಷ್ಟ್ರಪತಿಗಳು ಕೂಡಲೇ ಮಣಿಪುರದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮಂಡ್ಯನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಒಕ್ಕೂಟದ ಕಾರ್ಯಕರ್ತೆಯರು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಹಿಂಸಾಚಾರ ತಡೆಯಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದರು.
ಮಣಿಪುರದ ಮಹಿಳೆಯರ ಮೇಲೆ ಅಧಿಕಾರಿಗಳ ದರ್ಪ, ದಬ್ಬಾಳಿಕೆಗೆ ಕೊನೆ ಇಲ್ಲದಂತಾಗಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದು 78 ದಿನದವರೆಗೆ ರಾಜಕೀಯ ಉದ್ದೇಶದಿಂದ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಮ ವಹಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿತನವನ್ನು ಪ್ರತಿಭಟನಾಕಾರರು ಖಂಡಿಸಿದರು.
ಕೆಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಮಣಿಪುರರಾಜ್ಯದಲ್ಲಿ ಹಿಂಸಾಚಾರ ತಡೆದು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮುಂದಾಗಬೇಕು, ಮಹಿಳೆಯರ ನಿರ್ಭೀತಿ ಬದುಕಿಗೆ ಕಾನೂನು ರೀತ್ಯ ಸೂಕ್ತ ರಕ್ಷಣೆ ನೀಡಬೇಕು.
ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆ ಅತ್ಯಾಚಾರ ಮಾಡುವವರಿಗೆ ತ್ವರಿತ ಗತಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಮಣಿಪುರದಲ್ಲಿ ಶೋಷಣೆಗೊಳಗಾಗಿರುವ ಕುಟುಂಬಕ್ಕೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಬೇಕು, ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಲು ಈಗಿರುವ ಶಿಕ್ಷೆಯ ವಿಧಾನವನ್ನು ಬದಲಿಸಬೇಕು, ದೌರ್ಜನ್ಯ ಪ್ರಕರಣ ಕುರಿತು ತುರ್ತು ವಿಚಾರಣೆ ನಡೆಸಿ ಶಿಕ್ಷಿಸುವ ಮೂಲಕ ಹಿಂಸಾಚಾರ ನಿರತ ಉಗ್ರರನ್ನು ಮಟ್ಟ ಹಾಕಬೇಕು.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿ ಕಾನೂನು ವ್ಯವಸ್ಥೆಗೆ ಮುಂದಾಗಿ ಜನಾಂಗಿಯ ಹಿಂಸಾಚಾರ ತಡೆಗಟ್ಟಿ ಶಾಂತಿ ನೆಲೆಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಒಕ್ಕೂಟದ ಮುಖಂಡರಾದ ಭಾರತಿ, ಮೋಹಿದ್ದಿನ್, ಸೇಲ್ವಿ ಉಮಾ, ಭಾಗ್ಯಲಕ್ಷ್ಮಿ,ಲೀಲಾವತಿ, ಶ್ರುತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.