ದೇಶದ ಮಣಿಪುರ, ಹರಿಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದು, ಇದು ಸಂಘ ಪರಿವಾರದ ವ್ಯವಸ್ಥಿತ ದುಷ್ಕೃತ್ಯವಾಗಿದೆ ಎಂದು ಆರೋಪಿಸಿ ಎಸ್ಡಿಪಿಐ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಸಂಘಪರಿವಾರ ಹರಡಿದ ದ್ವೇಷದ ನಂಜು ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜನಾಂಗೀಯ ಕಲಹ, ಕೋಮು ದ್ವೇಷವು ದೇಶವನ್ನೇ ಹೊತ್ತು ಉರಿಸುತ್ತಿದೆ ಎಂದು ಆರೋಪಿಸಿದರು.
ದ್ವೇಷದ ಪರಿಣಾಮ ಹರಿಯಾಣದಲ್ಲಿ ಕೋಮುಗಲಭೆ, ಮಹಾರಾಷ್ಟ್ರದಲ್ಲಿ ಆರ್ಪಿಎಫ್ ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಹಬ್ಬಿದೆ ಎಂದು ದೂರಿದರು.
ಮೂರು ತಿಂಗಳಿಂದ ಮಣಿಪುರ ಹೊತ್ತು ಉರಿಯುತ್ತಿದ್ದರೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ, ಕೇಂದ್ರ ಸರ್ಕಾರ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದರೂ ಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐನ ಸಾದತ್ ಪಾಷ, ಮುಕ್ತಾರ್ ಅಹಮದ್, ಅಪ್ಸರ್ ಅಹಮದ್, ಅಮೀದುಲ್ಲಾ ಹಸನ್, ಮಹಮದ್ ತಾಹೇರ್, ಮಹಮದ್ ತಾಹೇರ್ ಇತರರು ಭಾಗವಹಿಸಿದ್ದರು.