ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ರೈತಸಂಘದ ಬೆಂಬಲಿತ ಅಭ್ಯರ್ಥಿ ಆಶಾರಾಣಿ ಸತೀಶ್ ಉಪಾಧ್ಯಕ್ಷರಾಗಿ ಮಂಜುಳಾ ಸಿ.ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಮುಂದುವರೆದ ಅವಧಿಗೆ ಮೀಸಲಾತಿ ಪ್ರಕಟಿಸಿದ್ದರಿಂದ ಚುನಾವಣೆ ನಿಗದಿಯಾಗಿತ್ತು. ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾದ ಆಶಾರಾಣಿ ಸತೀಶ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮಂಜುಳಾ ಸಿ.ಪುಟ್ಟಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾದ ಪಂಚಾಯತ್ ರಾಜ್ ಇಲಾಖೆ ಎಇಇ ರೇವಣ್ಣ ಘೋಷಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ರೈತಸಂಘ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಅಭಿನಂದಿಸಿ ಮಾತನಾಡಿ, ಪಿಡಿಓಗಳು ಸರಿಯಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರು ಒಗ್ಗೂಡಿ ಪ್ರೀತಿಯಿಂದ ಕೆಲಸ ಮಾಡಿದರೆ ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳು ಈಡೇರಿಲಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಕಾರ್ಯನಿರ್ವಹಿಸಬೇಕು ಎಂದರು.
ರೈತನಾಯಕ, ಮಾಜಿ ಶಾಸಕ ಪುಟ್ಟಣ್ಣಯ್ಯ ಅವರಿಗೆ ಕ್ಯಾತನಹಳ್ಳಿ ತಂದೆ ಮನೆ, ಹೆಣ್ಣು ತರದಿದ್ದರೂ ಕೆ.ಬೆಟ್ಟಹಳ್ಳಿ ಮಾವನ ಮನೆ ಇದ್ದಂತೆ. ಹಲವಾರು ವರ್ಷಗಳಿಂದ ಇಲ್ಲಿನ ಜನರು ಹಾಗೂ ನಮ್ಮ ಕುಟುಂಬ ಒಂದೇ ಕುಟುಂಬವೆಂಬ ಅಭಿಮಾನ ಇದೆ. ಚುನಾವಣೆ ಬರುತ್ತೆ, ಹೋಗುತ್ತೆ, ಆದರೆ ಅಭಿಮಾನ ಎಂದಿಗೂ ಬದಲಾಗುವುದಿಲ್ಲ. ದರ್ಶನ್ ಪುಟ್ಟಣ್ಣಯ್ಯ ಗೆಲುವು ಇದಕ್ಕೆ ಸೂಕ್ತ ಉದಾಹರಣೆ ಎಂದರು.
ಈ ವೇಳೆ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ, ತಾಲೂಕು ರೈತಸಂಘದ ಅಧ್ಯಕ್ಷ ಪಿ.ನಾಗರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಚಲುವರಾಜು, ಮುಖಂಡರಾದ ಹುಲ್ಕೆರೆ ಕುಮಾರ್, ಕೆ.ಬೆಟ್ಟಹಳ್ಳಿ ಕೃಷ್ಣೇಗೌಡ, ನಾಗೇಶ್, ರವಿ, ತಮ್ಮಯಣ್ಣ, ವಡ್ಡರಹಳ್ಳಿ, ಬೆಟ್ಟಹಳ್ಳಿ ಬಿ.ಟಿ.ಶಿವಣ್ಣ.ಎಲ್.ಐ.ಸಿ ಜಗದೀಶ್, ಡಾಮಡಹಳ್ಳಿ ಜಯರಾಂ, ಯಜಮಾನರಾದ ಚಿಕ್ಕೇಗೌಡ ಜವರಪ್ಪ, ಕಾಳೇಗೌಡ, ಗ್ರಾ.ಪಂ ಸದಸ್ಯರು ಇತರರಿದ್ದರು.