ತೆಂಗು ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 21,000 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು ಮತ್ತು ಅದನ್ನು ಕಾನೂನು ಬದ್ಧಗೊಳಿಸಬೇಕು, ಎಳನೀರು ಮತ್ತು ತೆಂಗಿನಕಾಯಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ ಮುಖಂಡರು ಸಂಸದರ ಕಚೇರಿಯ ಆಪ್ತ ಕಾರ್ಯದರ್ಶಿಗಳ ಮೂಲಕ ಸುಮಲತಾ ಅಂಬರೀಶ್ ರವರಿಗೆ ಮನವಿ ಸಲ್ಲಿಸಿದರು.
ಮುಕ್ತ ಮಾರುಕಟ್ಟೆ ಯಡಿಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ಕೂಡಲೇ ನಿಲ್ಲಿಸಬೇಕು, ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಲೋಕಸಭೆಯಲ್ಲಿ ಸಂಸದ ಸುಮಲತಾ ಅಂಬರೀಶ್ ಗಟ್ಟಿ ದನಿ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಎಣ್ಣೆ ಉಪಯೋಗಿಸುವ ಕಾರ್ಖಾನೆ, ಸಂಸ್ಥೆಗಳಲ್ಲಿ ತೆಂಗಿನೆಣ್ಣೆಯನ್ನು ಉಪಯೋಗಿಸಬೇಕು ಎಂದು ಸೂಚಿಸಬೇಕು, ಪೂರ್ಣ ಪ್ರಮಾಣದ ದಾಸ್ತಾನಿಗೆ ಗೋದಾಮು. ದೀರ್ಘಕಾಲ ರಕ್ಷಣೆಗೆ ಶೀತಲೀಕರಣ ಘಟಕದ ವ್ಯವಸ್ಥೆ ಮಾಡಬೇಕು. ವರ್ಷಪೂರ್ತಿ ಖರೀದಿ ಕೇಂದ್ರ ತೆರೆದು, ನಿರಂತರವಾಗಿ ಕೊಬ್ಬರಿ ಖರೀದಿಸಬೇಕು ವಾಯುಗುಣ ವೈಪರಿತ್ಯಕ್ಕೆ ತಕ್ಕಂತೆ ಕೃಷಿ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಬೇಕು, ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಹಾಗೂ ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳಾದ ನಾರು, ಚಿಪ್ಪು ನೀರಾ, ಎಳನೀರು, ತಿರುಳು, ಮರ, ಗರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟದ ಮುಖಂಡರಾದ ಎ.ಎಲ್.ಕೆಂಪುಗೌಡ, ಎನ್.ಎಲ್.ಭರತ್ ರಾಜ್, ಟಿ.ಎಲ್.ಕೃಷ್ಣೇಗೌಡ ಸಿದ್ದರಾಜು,ವರದರಾಜು,ಪಿ.ನಾಗರಾಜು, ಶೆಟ್ಟಹಳ್ಳಿ ರವಿಕುಮಾರ್, ವಿಜಯಕುಮಾರ್,ಲತಾ ಡಿ.ಡಿ.ಎಚ್.ನಾಗರಾಜು,ಕೆ, ಬೊಮ್ಮೇಗೌಡ ಉಪಸ್ಥಿತರಿದ್ದರು.