ತುಂಬಿದ ಸದನದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಮಂತ್ರಿ ಚಲುವರಾಯಸ್ವಾಮಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದ ದಿನವೇ ಒಂದು ಬೇನಾಮಿ ಪತ್ರ ರಾಜ್ಯಪಾಲರ ಅಂಗಳ ತಲುಪಿತ್ತು. ಅದರಲ್ಲಿ ಆಪಾದನೆ ಮಾಡಿರುವ ವ್ಯಕ್ತಿಗಳ ಕುಲ,ಗೋತ್ರ, ವಿಳಾಸ ಯಾವುದನ್ನು ಒಳಗೊಳ್ಳದ ದೂರಿನ ಪತ್ರವನ್ನು ಸನ್ಮಾನ್ಯ ರಾಜ್ಯಪಾಲರು ಮುಖ್ಯಕಾರ್ಯದರ್ಶಿ ಅವರಿಗೆ ವರ್ಗಾಹಿಸಿ ಪರಿಶೀಲನೆ ಮಾಡಿ ಕ್ರಮವಹಿಸಿ ಎಂದು ಒಂದು ಕವರಿಂಗ್ ಲೆಟರ್ ಬರೆದಿದ್ದರಿಂದ ಚಲುವರಾಯಸ್ವಾಮಿ ಅವರ ವ್ಯಕ್ತಿತ್ವಕ್ಕೆ ಎಷ್ಟು ಡ್ಯಾಮೇಜ್ ಆಗಬಹುದೋ ಅಷ್ಟು ಡ್ಯಾಮೇಜ್ ಆಗಿ ಹೋಗಿದೆ.
ಸಾಮಾನ್ಯವಾಗಿ ಅಧಿಕಾರಿಗಳು ಎಷ್ಟೇ ಕಷ್ಟವಾಗಲಿ, ಗುಂಪಾಗಿ ಅಧಿಕಾರದಲ್ಲಿರುವ ಮಂತ್ರಿ ವಿರುದ್ದ ರಾಜ್ಯಪಾಲರಿಗೆ ದೂರು ನೀಡುವುದನ್ನು ಕನಸಿನಲ್ಲಿಯೂ ಸಹ ಊಹಿಸುವುದು ಕಷ್ಟ. ಹೆಚ್ಚೆಂದರೆ ಒಬ್ಬರು ವೈಯಕ್ತಿಕವಾಗಿ ದೂರು ನೀಡಬಹುದಷ್ಟೇ. ಹಾಗಾಗಿ ಇದರಲ್ಲಿ ಕುಮಾರಣ್ಣ ಅವರ ಕೈಚಳಕವಿದೆ ಎಂದು ಮಂಡ್ಯದ ರಾಜಕೀಯ ವಲಯದಲ್ಲಿ ಗುಸುಗುಸು ಕೇಳಿ ಬರುತ್ತಿದೆ.
ತುಂಬಿದ ವಿಧಾನಸಭೆಯಲ್ಲಿ ಒಂದಾನೊಂದು ಕಾಲದ ಆಪ್ತ ಮಿತ್ರ ಚಲುವರಾಯಸ್ವಾಮಿ ವಾಚಾಮಗೋಚರವಾಗಿ ಹರಿಹಾಯ್ದದ್ದನ್ನು ಸಹಿಸದ ಕುಮಾರಸ್ವಾಮಿ ಗೇಮ್ ಪ್ಲಾನ್ ಗೆ ಚಲುವರಾಯಸ್ವಾಮಿ ತತ್ತರಗೊಂಡಿರುವುದಂತೂ ಸತ್ಯ.