ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಛಲ ಇರಬೇಕು, ವಿದ್ಯಾರ್ಥಿ ಜೀವನ ಚಿನ್ನದಂತ ಜೀವನವಾಗಿದ್ದು, ಅದನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ, ಆದ್ದರಿಂದ ಅಮೂಲ್ಯವಾದ ಅವಧಿಯನ್ನು ಉಪಯೋಗಿಸಿಕೊಂಡು ಉನ್ನತವಾಗಿ ವ್ಯಾಸಂಗ ಮಾಡಿ, ದೇಶಕ್ಕೆ ಉತ್ತಮ ಪ್ರಜೆಯಾಗಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಂಡ್ಯದ ಜ್ಞಾನಸಾಗರ ಕ್ಯಾಂಪಸ್ ನಲ್ಲಿ ಎಸ್.ಬಿ.ಎಜುಕೇಶನ್ ಟ್ರಸ್ಟ್, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಜ್ಞಾನಸಾಗರ ಕ್ಯಾಂಪಸ್ ನಲ್ಲಿ ನಡೆದ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಜವಾದ ಹಸಿವು ಜ್ಞಾನ ಕಲಿಕೆ, ವಿದ್ಯದಾನ ಜೀವನದ ಕೊನೆ ಉಸಿರಿರುವವರೆಗೂ ಸಂತೋಷ, ಸಂತೃಪ್ತಿ ಕೊಡುತ್ತದೆ. ಒಳ್ಳೆಯ ಮನಸ್ಸು ಇದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಮಂಡ್ಯ ಜಿಲ್ಲೆಯಲ್ಲಿ ಎಕ್ಸಲೆನ್ಸ್ ಕಾಲೇಜ್ ಸ್ಥಾಪನೆ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಸಿಗಲು ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಎಕ್ಸಲೆನ್ಸ್ ಕಾಲೇಜಿನ ಸೇವೆ ಶ್ಲಾಘನೀಯ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಓದುವುದು ಮುಂದಿನ ನಿಮ್ಮ ಬದುಕಿಗೆ ಆಸರೆಯಾಗುತ್ತದೆ. ಆದ್ದರಿಂದ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ, ಉತ್ತಮ ಸಂಸ್ಕಾರ ಗೌರವ ಬೆಳೆಸಿಕೊಂಡಲ್ಲಿ ಮೌಲ್ಯಧಾರಿತ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕೃತರಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿನಿ ಆರ್.ಶ್ವೇತಾ ರಾಣಿ, ರಾಜ್ಯಕ್ಕೆ ಆರನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿ ವೈ.ಸಿ.ಹೃತಿಕ್, ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿರುವ ಸ್ಪಂದನ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್’ಬಿಇಟಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ,
ಪದವಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಉಮೇಶ್, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ಪಾಲುದಾರರಾದ ಹೆಚ್.ಎಂ.ಶ್ರೀನಿವಾಸ್, ಎಂ.ಆರ್. ಮಂಜು, ಚೇತನ್ ಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.