ಪರಿಸರದ ಬಗ್ಗೆ ಅರಿವು ಮೂಡಿಸುವ, ಸಂರಕ್ಷಣೆ ಮಾಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ವಿ.ಶೆಟ್ಟಿ ತಿಳಿಸಿದರು.
ಮಂಡ್ಯ ನಗರದ ಅನ್ನಪೂರ್ಣೇಶ್ವರಿ ನಗರದ 17ನೇ ಕ್ರಾಸ್ ನಲ್ಲಿರುವ ಕೆರೆ ಪಕ್ಕದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮ, ಮಂಡ್ಯ ಮಧುರ ಲಯನ್ ಸಂಸ್ಥೆ, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಮರ ಮಾಡಬೇಕು.ಇದರಿಂದ ಹೆಚ್ಚು ಮಳೆ ಆಗುತ್ತದೆ ಎಂದು ಹೇಳಿದರು.
ಅರಣ್ಯ ಅಧಿಕಾರಿ ಶಂಕರೇಗೌಡ ಮಾತನಾಡಿ, ಗಿಡ-ಮರಗಳ ನಾಶದಿಂದ ಅರಣ್ಯ ಪ್ರದೇಶ ನಾಶವಾಗುತ್ತಿದೆ. ಗಿಡ-ಮರದ ಜೊತೆಗೆ ಆಧುನಿಕತೆಯ ಭರದಲ್ಲಿ ಐಷಾರಾಮಿ ಜೀವನ ಸಾಗಿಸಲು ನೀರು, ಆಹಾರ,ಗಾಳಿಯನ್ನು ಸಹ ನಾವು ಕಲುಷಿತಗೊಳಿಸುತ್ತಿದ್ದೇವೆ. ಈ ಕುರಿತು ಜನರಲ್ಲಿ ಪರಿಸರದ ಜಾಗೃತಿ ಜೊತೆಗೆ ಜನಾಂದೋಲನದೊಂದಿಗೆ ಅರಣ್ಯ ಕ್ಷೇತ್ರ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.
ಮುಂದಿನ ದಿನಮಾನಗಳಲ್ಲಿ ಪ್ರಕೃತಿ ಹಾಗೂ ಪರಿಸರ ಮನುಕುಲಕ್ಕೆ ದೊಡ್ಡ ಸವಾಲು ಆಗಲಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಈಗಿನಿಂದಲೇ ಗಿಡ-ಮರಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜು, ಉಪಾಧ್ಯಕ್ಷ
ಕೆ.ಎಲ್.ಮರಿಸ್ವಾಮಿ, ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ತ್ಯಾಗರಾಜು, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷ ಬಿ.ಎಂ.ಮಹೇಶ್, ಮಾಜಿ ಅಧ್ಯಕ್ಷ ಲೋಕೇಶ್, ಸದಸ್ಯರಾದ ಮಾಲತಿ ಸುರೇಶ್, ಚೌಧರಿ, ಕಾಳೇಗೌಡ, ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯ ಪಾಲಕ ಅಭಿಯಂತರ ವಿಶ್ವನಾಥ, ಕಿರಿಯ ಅಭಿಯಂತರ ಜಿ.ಎನ್.ಕೆಂಪರಾಜು, ವಲಯ ಅರಣ್ಯ ಅಧಿಕಾರಿ ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.