ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದ ದೊಡ್ಡಕೆರೆಯ ಮೀನುಗಾರಿಕೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೇ ಹೊರ ಜಿಲ್ಲೆಯವರಿಗೆ ನೀಡಲಾಗಿದೆ ಎಂದು ಆರೋಪಿಸಿ ಅರಕೆರೆ ಮೀನುಗಾರರ ಸಹಕಾರ ಸಂಘದ ಸದಸ್ಯರು ಮಂಡ್ಯನಗರದ ಮೀನುಗಾರಿಕೆ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಸ್ಥಳೀಯ ವೃತ್ತಿಪರ ಮೀನುಗಾರರು ಸದಸ್ಯರಾಗಿರುವ ಸಂಘಕ್ಕೆ ಮೀನುಗಾರಿಕೆ ಗುತ್ತಿಗೆ ನೀಡದೇ ಮೈಸೂರಿನ ಒಳನಾಡು ಮೀನುಗಾರರ ಅಭಿವೃದ್ಧಿ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ, ಕಳೆದ ದಶಕದಿಂದ ಗುತ್ತಿಗೆ ಮಾಡುತ್ತಿದ್ದ ಮೀನುಗಾರರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಸಹಕಾರ ಇಲಾಖೆಯ ನಿಯಮಾವಳಿಯಂತೆ ಅರಕೆರೆ ಮೀನುಗಾರರ ಸಹಕಾರ ಸಂಘ ನಡೆದುಕೊಂಡು ಬರುತ್ತಿದೆ, ಆದರೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇಲಾಖೆಗೆ ಪತ್ರ ಬರೆದು ಅರಕೆರೆ ಮೀನುಗಾರರ ಸಹಕಾರ ಸಂಘದ ಲೆಕ್ಕಪತ್ರ ತಪಾಸಣೆ ನಡೆಸುವಂತೆ ಕೋರಿದ್ದಾರೆ. ಅದರಂತೆ ನಮ್ಮ ಸಂಘಕ್ಕೆ ಯಾವುದೇ ಸೌಲಭ್ಯಗಳನ್ನು ನೀಡದೇ ಅಧಿಕಾರಿಗಳು ನಿರ್ಬಂಧ ಹಾಕಿದ್ದಾರೆ ಎಂದು ದೂರಿದರು.
ಸಹಕಾರ ಸಂಘದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿರುವ ಸ್ಥಳೀಯ ಸಂಘವನ್ನು ಬಿಟ್ಟು ವೃತ್ತಿಪರ ಮೀನುಗಾರರಲ್ಲದ ಸದಸ್ಯರನ್ನು ಹೊಂದಿರುವ ಸಂಘಕ್ಕೆ ಗುತ್ತಿಗೆ ನೀಡುವ ಮೂಲಕ ಗಂಗಾಮತಸ್ಥ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಚಿಕ್ಕಣ್ಣ,ಜಿ.ಎಸ್ ಸಿದ್ದಯ್ಯ,ಈರಯ್ಯ, ಉಮೇಶ್ ಹಾಡ್ಯ ಪ್ರತಿಭಟನೆಯಲ್ಲಿದ್ದರು.