ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಅಂಗಾತ ಮಲಗಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡಿರುವ ಘಟನೆ ಬೆಂಗಳೂರಿನ ರಾಜಾನುಕುಂಟೆ ಬಳಿ ನಡೆದಿದೆ, ಸದ್ಯ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರೈಲಿನಡಿ ನುಗ್ಗಿ ಹಳಿ ದಾಟುವ ಯತ್ನದಲ್ಲಿದ್ದಾಗ ದಿಢೀರನೇ ರೈಲು ಚಲಿಸಿದ ಹಿನ್ನೆಲೆಯಲ್ಲಿ ಮಹಿಳೆ ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಪಾರ್ವತಿಪುರ, ಅದ್ದಿಗಾನಹಳ್ಳಿ, ತರಹುಣಸೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು, ಕಾರ್ಮಿಕರು, ವಿದ್ಯಾರ್ಥಿಗಳು ರಾಜಾನುಕುಂಟೆ ತಲುಪಲು ರೈಲು ಹಳಿ ದಾಟಿ ಸಾಗಬೇಕಿದೆ. ರೈಲ್ವೆ ಕ್ರಾಸಿಂಗ್ ಸಮಯದಲ್ಲಿ ಗೂಡ್ಸ್ ರೈಲುಗಳು ಇಲ್ಲಿ ನಿಂತಿರುತ್ತವೆ. ಕೆಲವರು ಗೂಡ್ಸ್ ರೈಲುಗಳನ್ನು ಹಾರಿ ಹೋದರೆ, ಇನ್ನು ಕೆಲವರು ರೈಲಿನಡಿ ನುಗ್ಗಿ ದಾಟುತ್ತಾರೆ. ಅದೇ ರೀತಿ ಅದ್ದಿಗಾನಹಳ್ಳಿ ನಿವಾಸಿ ಮಹಿಳೆಯೊಬ್ಬರು ರಾಜಾನುಕುಂಟೆಯತ್ತ ತೆರಳಲು ರೈಲಿನ ಅಡಿ ನುಗ್ಗಿದ್ದರು. ಅಷ್ಟರಲ್ಲೇ ರೈಲು ಚಲಿಸಲು ಆರಂಭಿಸಿದೆ. ಇನ್ನೊಂದು ಭಾಗಕ್ಕೆ ತೆರಳುವುದು ಅಪಾಯಕಾರಿ ಎಂದು ಅರಿತ ಮಹಿಳೆ ಹಳಿಯ ಮಧ್ಯೆಯೇ ಬೋರಲಾಗಿ ಮಲಗಿಕೊಂಡಿದ್ದಾರೆ. ರೈಲು ಹೋದ ನಂತರ ಎದ್ದು ಬಂದಿದ್ದಾರೆ. ಸಂಪೂರ್ಣ ದೃಶ್ಯಾವಳಿಯನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಬಿಟ್ಟಿದ್ದಾರೆ.
ಕೆಳಸೇತುವೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳ ಒತ್ತಾಯ
ಈ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿದ್ದು, ”ಇದೇ ಪ್ರದೇಶದಲ್ಲಿ ಆರು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ರೈಲು ಹತ್ತಿ ಇಳಿಯುವಾಗ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಎರಡು ವರ್ಷಗಳ ಹಿಂದೆ ಹಳಿ ಕೆಳಗೆ ನುಗ್ಗಲು ಹೋಗಿ ಆಂಧ್ರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಪ್ರತಿದಿನ ಸಾವಿರಾರು ಜನರು ಅಪಾಯಕಾರಿಯಾಗಿ ರೈಲು ಹಳಿ ದಾಟುತ್ತಾರೆ. ಈ ಹಿನ್ನೆಲೆಯಲ್ಲಿ ಕೆಳಸೇತುವೆ ನಿರ್ಮಾಣ ಮಾಡಿ ಈ ಅವ್ಯವಸ್ಥೆಗೆ ಮುಕ್ತಿಕೊಡಿ” ಎಂದು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.