ಹೇಮಾವತಿ ಜಲಾಶಯ ಯೋಜನೆಯ ಕಾಲುವೆಗಳ ಮೂಲಕ ನೀರು ಹರಿಸಿ ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ರೈತಬಾಂಧವರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
.ಆರ್.ಪೇಟೆ ಪಟ್ಟಣದ ಸುಭಾಷ್ನಗರ ಬಡಾವಣೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಾಜಶೇಖರ್ ಅವರು ಹಮ್ಮಿಕೊಂಡಿದ್ದ ಹೃದಯಸ್ಪರ್ಷಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ದಂಪತಿಗಳು ಪ್ರೀತಿಯಿಂದ ನೀಡಿದ ಬೆಳ್ಳಿಗದೆಯನ್ನು ಸ್ವೀಕರಿಸಿ ನೆರೆದಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.
ಕೆ.ಆರ್.ಪೇಟೆ ತಾಲೂಕಿನ ಜನತೆ ನನ್ನ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವನ್ನು ಹೊಂದಿದ್ದಾರೆ. ನನ್ನನ್ನು 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಜನತೆಗೆ ಹೆಚ್ಚಿನ ಮತ ನೀಡುವ ಮೂಲಕ ನನ್ನ ಗೆಲುವಿಗೆ ಕಾರಣರಾಗಿದ್ದೀರಿ. ಅಲ್ಲದೆ ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಗಡಿ ತಾಲ್ಲೂಕಿನ ಗ್ರಾಮಗಳಲ್ಲಿ ನನ್ನ ಗೆಲುವಿಗಾಗಿ ತಮ್ಮ ಬಂಧುಗಳು ಮತ್ತು ನೆಂಟರಿಷ್ಟರಿಗೆ ಹೇಳಿ ನನಗೆ ಮತ ನೀಡಲು ಸಹಕಾರಿ ನೀಡಿದ್ದೀರಿ ಜೊತೆಗೆ ನಾನು ಶಾಸಕನಾದಾಗ, ಸಚಿವನಾದಾಗ ನನ್ನ ಗೆಲುವನ್ನು ಕಂಡು ಸಂಭ್ರಮಿಸಿದ್ದಾರೆ ಎಂದರು.
ಇಲ್ಲಿನ ಜನರ ಪ್ರೀತಿವಿಶ್ವಾಸವನ್ನು ಮರೆಯುವುದಿಲ್ಲ
ನಾನು ಡಿಪ್ಲೋಮೋ ವ್ಯಾಸಂಗ ಮಾಡಿದ್ದು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. ನನ್ನ ಬದುಕನ್ನು ರೂಪಿಸಿಕೊಳ್ಳಲು ಕಾರಣವಾಗಿದ್ದು ಕೆ.ಆರ್.ಪೇಟೆ ತಾಲ್ಲೂಕು. ಹಾಗಾಗಿ ನಾನು ನನ್ನ ಜೀವನದಲ್ಲಿ ಎಂದಿಗೂ ಕೆ.ಆರ್.ಪೇಟೆ ತಾಲೂಕು ಹಾಗೂ ಇಲ್ಲಿನ ಜನರ ಪ್ರೀತಿವಿಶ್ವಾಸವನ್ನು ಮರೆಯುವುದಿಲ್ಲ ಎಂದು ಹೇಳಿದರು.
ಹೇಮಾವತಿ ಜಲಾಶಯ ಯೋಜನೆಯ ರೈತರು ಕೆರೆಗಳು ತುಂಬಿಲ್ಲ ಎಂದು ಆತಂಕಕ್ಕೊಳಗಾಗಬೇಕಾಗಿಲ್ಲ. ಕಟ್ಟು ಪದ್ದತಿಯಲ್ಲಾದರೂ ನೀರನ್ನು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಲು ಕ್ರಮ ವಹಿಸುತ್ತೇನೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಸಮಾಜ ಸೇವಕ ದಂಪತಿಗಳಾದ ವಿಜಯಲಕ್ಷ್ಮಿ ಬಿ.ರಾಜಶೇಖರ್ ಅವರ ಪ್ರೀತಿ ಅಭಿಮಾನ ದೊಡ್ಡದು ಅವರು ನನ್ನನ್ನು ಆಹ್ವಾನಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೆಳ್ಳಿಯ ಗದೆಯನ್ನು ಕೊಡುಗೆಯಾಗಿ ನೀಡಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ನನ್ನ ಜೀವನದ ಕೊನೆಯ ಉಸಿರಿನವರೆಗೂ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿಗೆ ಅರ್ಪಣಾ ಭಾವನೆಯಿಂದ ತೊಡಗಿಸಿಕೊಳ್ಳುತ್ತೇನೆ ಎಂದು ಅಭಿಮಾನಿಗಳ ಭಾರೀ ಚಪ್ಪಾಳೆಯ ನಡುವೆ ಘೋಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಉಪ ವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ನಿಸರ್ಗಪ್ರಿಯ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಯುಐಡಿಎಫ್ಸಿ ಮಾಜಿ ರಾಜ್ಯಾಧ್ಯಕ್ಷ ಮತ್ತಿಘಟ್ಟ ಎಂ.ಡಿ.ಕೃಷ್ಣಮೂರ್ತಿ, ಕಾಂಗ್ರೇಸ್ ಮುಖಂಡರಾದ ವಿಜಯ್ ರಾಮೇಗೌಡ, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷ ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ ರಮೇಶ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು ಮತ್ತಿತರರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.