ತಮಿಳುನಾಡಿಗೆ ಕೆ.ಆರ್.ಎಸ್ ನಿಂದ ಹರಿಸುತ್ತಿದ್ದ ನೀರನ್ನು ರಾಜ್ಯ ಸರ್ಕಾರ ಸ್ಥಗಿತ ಶುಕ್ರವಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕಳೆದ 9 ದಿನಗಳಿಂದ ನಡೆಸುತ್ತಿದ್ದ ಕಾವೇರಿ ಹೋರಾಟವನ್ನು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ತಾತ್ಕಾಲಿಕವಾಗಿ ಹಿಂಪಡೆದಿದೆ.
ರಾಜ್ಯ ಸರ್ಕಾರ ನೆರೆರಾಜಕ್ಕೆ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಿರುವುದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ಸಮಿತಿಯ ಮುಖಂಡರು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಚಳುವಳಿ ಸಿಲ್ವರ್ ಜ್ಯೂಬಿಲಿ ಪಾರ್ಕಿನ ಹಿಪ್ಪೆ ಮರದ ಕೆಳಗೆ ನಡೆಯುತ್ತಿತ್ತು, ಹಿಪ್ಪೆ ಮರದ ಚಳುವಳಿ ಎಂದೇ ಪ್ರಸಿದ್ಧಿ ಪಡೆದಿತ್ತು, ಕಾವೇರಿ ಕೊಳ್ಳದ ರೈತರ ಹಿತ ಕಾಪಾಡುವುದೇ ನಮ್ಮ ಪ್ರಮುಖ ಉದ್ದೇಶ, ಹಾಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದೇವೆ, ಯಾವುದೇ ಸರ್ಕಾರ ಬರಲಿ ಕಾವೇರಿ ವಿಚಾರದಲ್ಲಿ ಎಲ್ಲರ ವಿರುದ್ಧವೂ ಹೋರಾಟ ಮಾಡಿದ್ದೇವೆ, ಮುಂದೆಯೂ ಸರ್ಕಾರ ರೈತರ ಹಿತ ಕಾಪಾಡದಿದ್ದರೆ ಹೋರಾಟ ಅನಿವಾರ್ಯ ಎಂದರು.
ಸರ್ಕಾರ ರೈತರ ಕಾಪಾಡಲು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ್ದೇವೆ, ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಚರ್ಚೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಹೋರಾಟಗಾರರ ಸಭೆ ಕರೆಯಬೇಕೆಂದು ಒತ್ತಾಯಿಸಿದು.
ಸಂಸದೆ ಸುಮಲತಾ ಅಂಬರೀಶ್ ಕೇಂದ್ರದ ಮೇಲೆ ಒತ್ತಡ ಹಾಕುವುದರಲಿ ರೈತರ ಪರ ಹೋರಾಟ ಮಾಡಲಿಲ್ಲ, ಕಾವೇರಿ ಜಲಾಯನ ಪ್ರದೇಶದ ಎಂಟು ಜಿಲ್ಲೆಗಳ ಸಂಸದರು ಸೇರಿ ರಾಜ್ಯದ ಎಲ್ಲಾ ಪಕ್ಷದ ಸಂಸದರು ಬಾಯಿ ತೆರೆಯಲಿಲ್ಲ, ಅದ್ಯಾಕೋ ಬಾಯಿ ಬಂದ್ ಮಾಡಿಕೊಂಡಿದ್ದಾರೆ ನಮಗೆ ಗೊತ್ತಾಗುತ್ತಿಲ್ಲ ಕಿಡಿಕಾರಿದರು.
ತಮಿಳುನಾಡಿಗೆ ನೀರು ಸ್ಥಗಿತದ ಹಿನ್ನೆಲೆಯಲ್ಲಿ ಹೋರಾಟ ವಾಪಸ್ ಪಡೆದಿದ್ದೇವೆ, ರಾಜ್ಯ ಸರ್ಕಾರ ಮೊದಲು ಇಲ್ಲಿನ ರೈತರ ಹಿತ ಕಾಯಲು ಮುಂದಾಗಬೇಕು, ಇಲ್ಲವಾದರೆ ಬೀದಿಗಿಳು ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಕೆ.ಬೋರಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಉಪಸ್ಥಿತರಿದ್ದರು.