ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದ ಹೊಸೂರು ಗ್ರಾಮದ ಬಳಿ ಇರುವ ಬೆಟ್ಡದ ತಪ್ಪಲಿನಲ್ಲಿರುವ ಬೋಳಾರೆ ರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಶ್ರಾವಣ ಮಾಸದ ಅಂಗವಾಗಿ ತಿಂಗಳಿಡೀ ವಿಶೇಷ ಪೂಜೆ ನಡೆದು ಕಡೇ ಶ್ರಾವಣ ಶನಿವಾರದಂದು ಚಿಕ್ಕ ತಿರುಪತಿ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದಿರುವ ಶ್ರೀಬೋಳಾರೆ ರಂಗನಾಥಸ್ವಾಮಿಯವರ 9ನೇ ವರ್ಷದ ಬ್ರಹ್ಮ ರಥೋತ್ಸವಕ್ಕೆ ಶಾಸಕ ಹೆಚ್.ಟಿ.ಮಂಜು ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಹಾಗೆಯೇ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಸುಂದರ ಪರಿಸರದಲ್ಲಿರುವ ಬೆಟ್ಟದ ಮೇಲೆ ತಪ್ಪಲಿನಲ್ಲಿ ನೆಲಸಿರುವ ಪುರಾತನ ಹಾಗೂ ಪ್ರಸಿದ್ಧ ರಂಗನಾಥಸ್ವಾಮಿ ಮಹಾ ಬ್ರಹ್ಮ ರಥೋತ್ಸವದ ಕಾರ್ಯಕ್ರಮವನ್ನು ಸುಮಾರು 10 ರಿಂದ 15 ಗ್ರಾಮಗಳು ಸೇರಿ ಸತತವಾಗಿ 9 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಉತ್ಸವ ಮೂರ್ತಿಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಜನರಿಗೆ ಹಬ್ಬ,ಹರಿದಿನಗಳು,ಜಾತ್ರೆ, ರಥೋತ್ಸವ ಎಂದರೆ ಉಲ್ಲಾಸ, ಸಂತೋಷ, ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ದೇವಾಲಯಗಳು ಎಂದರೆ ವಿಶೇಷ ಪ್ರೀತಿ ಗೌರವವನ್ನು ಸಲ್ಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಟ್ರಸ್ಟ್ ಅಧ್ಯಕ್ಷ ಬೂಕನಕೆರೆ ವೆಂಕಟೇಶ್, ಮೈಸೂರು ಮಿಲ್ಕ್ ಫೆಡರೇಶನ್ ನಿರ್ದೇಶಕ ಎಸ್ ಸಿ ಅಶೋಕ್, ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಬಿ ಟಿ ವೆಂಕಟೇಶ್, ಗೌರವಾಧ್ಯಕ್ಷ ಬಿ ಪುಟ್ಟಸ್ವಾಮಿ, ಉಪಾಧ್ಯಕ್ಷ ರಂಗಸ್ವಾಮಿ, ಬೆಟ್ಟೇಗೌಡ, ವೆಂಕಟರಮಣೇಗೌಡ,ಕಾರ್ಯದರ್ಶಿ ಸುದರ್ಶನ್, ಸಹ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.