ಬ್ಯಾಂಕುಗಳಿಂದಾಗಿ ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಹೀಗಾಗಿ ಹೆಚ್ಚು ಹೆಚ್ಚು ಸಾಲ ಸೌಲಭ್ಯಗಳನ್ನು ಬ್ಯಾಂಕ್ ಗಳು ಜನರಿಗೆ ನೀಡಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಜನಾ ಆಶಾ ಸೌತ್ ನಿಧಿ ಲಿಮಿಟೆಡ್ ಬ್ಯಾಂಕ್ನ ಕಚೇರಿ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೀಗಾಗಿ ಈ ರೀತಿಯ ಬ್ಯಾಂಕ್ಗಳು ಹೆಚ್ಚು ಹೆಚ್ಚು ಸ್ಥಾಪನೆಯಾದರೆ ಉದ್ಯೋಗಗಳು ಸೃಷ್ಟಿಯಾಗಿ ದೇಶದಲ್ಲಿ ನಿರುದ್ಯೋಗ ನಿವಾರಣೆಯಾಗಲಿದೆ ಎಂದರು.
ಬ್ಯಾಂಕ್ ಒಳ್ಳೆಯ ಉದ್ದೇಶದಿಂದ ಆರಂಭ ಗೊಂಡಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಬ್ಯಾಂಕ್ ಅವರಿಗೆ ನೆರವಾಗಬೇಕು ಎಂದು ಸೂಚನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜನಾ ಆಶಾ ಸೌತ್ ನಿಧಿ ಬ್ಯಾಂಕ್ ನಿರ್ದೇಶಕ ಗಿರೀಶ್ ಆಲೂರ್ ಮಾತನಾಡಿ, ಬಡವರು, ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ನೆರವಾಗುವ ಉದ್ದೇಶದಿಂದ ಜನಾ ಆಶಾ ಸೌತ್ ನಿಧಿ ಬ್ಯಾಂಕ್ ಸ್ಥಾಪಿತವಾಗಿದೆ ಎಂದು ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಮತ್ತೊಂದು ಬ್ಯಾಂಕ್ಗೆ ವಿಲೀನಗೊಳಿಸಿದೆ. ಜನಾ ಆಶಾ ಸೌತ್ ನಿಧಿ ಬ್ಯಾಂಕ್ ರಿಸರ್ವ್ ಬ್ಯಾಂಕ್ನಿಂದ ಅನುಮತಿ ಪಡೆದು 2018ರಿಂದ ಕಾರ್ಯನಿರ್ವಹಿಸುತ್ತಿದೆ. ಮೊದಲು ಈ ಬ್ಯಾಂಕ್ ಉತ್ತರ ಪ್ರದೇಶದಲ್ಲಿ ಆರಂಭಗೊಂಡು ಇದೀಗ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸ್ಥಾಪನೆಯಾಗಿದೆ. ಮುಂದಿನ ತಿಂಗಳಿನಿಂದ ಕೇರಳ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಕರ್ನಾಟಕದಲ್ಲಿ ಪಾಂಡವಪುರ ಶಾಖೆ ಸೇರಿ ಒಟ್ಟು 18 ಶಾಖೆಗಳು ಆರಂಭಗೊಂಡಿವೆ ಎಂದು ತಿಳಿಸಿದರು.
ರೀಜನಲ್ ಮ್ಯಾನೇಜರ್ ಎಸ್.ಶಿವಣ್ಣ, ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಎಚ್.ಎಲ್.ಯಮುನಾ, ತಾಲೂಕು ಘಟಕದ ಅಧ್ಯಕ್ಷ ಜನತಾ ಭಂಡಾರ ರಾಮಕೃಷ್ಣೇಗೌಡ, ಡೆವಲಪ್ಮೆಂಟ್ ಮ್ಯಾನೇಜನರ್ಗಳಾದ ನಂದೀಶ್, ಜೋಸೆಫ್, ಟಿ.ಶ್ರೀನಿವಾಸ್, ಪಿ. ರವಿಕುಮಾರ್, ವೇದಿಕೆಯ ಸಿ.ನರಸಿಂಹೇಗೌಡ, ಶಿವಸ್ವಾಮಿ ವೀರಭದ್ರಸ್ವಾಮಿ, ಕೆ.ಜೆ.ಲೋಕೇಶ್, ಕೃಷ್ಣ ಕನಗನಮರಡಿ ಎ.ನಾಗರಾಜು, ಸಿ.ಎಂ.ವೆಂಕಟೇಶ್ ಮತ್ತಿತರರಿದ್ದರು.