ಅಣೆಕಟ್ಟೆಗಳಲ್ಲಿ ನೀರಿಲ್ಲದ ಸಮಯದಲ್ಲೂ ನೀರು ಬಿಡುಗಡೆ ಮಾಡಬೇಕೆಂಬ ಕುರುಡು ಆದೇಶಗಳಿಂದ ರಾಜ್ಯದ ಕಾವೇರಿ ಕಣಿವೆ ರೈತರಿಗೆ ಘೋರ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಿಪಡಿಸಿ, ಮಂಡ್ಯ ಯೂತ್ ಗ್ರೂಪ್ ಮಂಡ್ಯನಗರದಲ್ಲಿ ವಿನೂತನ ಕಾಮನ್ ಸೆನ್ಸ್ ಚಳವಳಿ ನಡೆಸಿ, ಗಮನ ಸೆಳೆಯಿತು.
ಮಂಡ್ಯ ನಗರದ ಆರ್.ಪಿ.ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿ.ವಿ.ರಸ್ತೆ, ಮಹಾವೀರ ವೃತ್ತದ ಮೂಲಕ ಮೆರವಣಿಗೆ ನಡೆಸಿ ಯೂತ್ ಗ್ರೂಪ್ ಸದಸ್ಯರು, ಸಂಜಯ ವೃತ್ತದಲ್ಲಿ ಸಮಾವೇಶಗೊಂಡರು.
ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿದೆ. ಮಳೆ ಕೊರತೆಯಿಂದ ಬರಗಾಲ ಎದುರಾಗಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಭರ್ತಿಯಾಗಿಲ್ಲ. ಅಣೆಕಟ್ಟುಗಳಲ್ಲಿ ಅತಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗೆ ಸಾಲುವಷ್ಟು ನೀರು ಮಾತ್ರ ಇದೆ. ಇವೆಲ್ಲವೂ ಕಣ್ಣಿಗೆ ಕಾಣುತ್ತಿರುವ ವಾಸ್ತವ ಸತ್ಯವಾಗಿದೆ. ಪರಿಸ್ಥಿತಿ ಹೀಗಿದ್ದರೂ ನೀರು ಬಿಡುವ ಆದೇಶ ಸರಿಯಲ್ಲ ಎಂದು ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಕಿಡಿಕಾರಿದರು.
ಕರ್ನಾಟಕದ ಕಾವೇರಿ ಕಣಿವೆ ಭಾಗಕ್ಕೆ ಮಳೆಗಾಲ ಮುಗಿದಿದೆ. ಮಳೆ ಬರುವ ಯಾವುದೇ ಲಕ್ಷಣಗಳೂ ಇಲ್ಲ. ಜಲಾಶಯಗಳು ಭರ್ತಿಯಾಗುವುದು ಈ ವರ್ಷ ಕನಸಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಕಾಯ್ದುಕೊಂಡಿರುವ ನೀರನ್ನೂ ಬಿಡುಗಡೆ ಮಾಡುವಂತೆ ಆದೇಶ
ಹೊರಡಿಸುತ್ತಿರುವುದು ಅಮಾನವೀಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ದರ್ಶನ್, ರಾಜಣ್ಣ, ಪ್ರತಾಪ್, ವಿನಯ್, ರಕ್ಷಿತ್, ಸೈಯದ್, ಮೌಸಿನ್, ಶಶಿ, ಯೋಗಿ, ನವೀನ್, ಪ್ರಸಾದ್, ಚಲುವರಾಜು, ಪವನ್ ಮತ್ತಿತರರಿದ್ದರು.