ರಾಜ್ಯದ ರೈತರ ಸಂಕಷ್ಟದ ನಡುವೆಯೂ ತಮಿಳು ನಾಡಿಗೆ ನೀರು ಬಿಡಲು ಶಿಫಾರಸ್ಸು ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ಬಿಡುತ್ತಿರುವ ರಾಜ್ಯ ಸರ್ಕಾರಗಳ ಹೆಸರನ್ನು ಕತ್ತೆಗಳಿಗೆ ನಾಮಕರಣ ಮಾಡಿ ಮಂಡ್ಯದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಬಂದು ಅವುಗಳಿಗೆ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಎಂದು ನಾಮಕರಣ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆ ಆರ್ ಎಸ್ ನಿಂದ 5,000ಕ್ಕೂ ಹೆಚ್ಚು ಕ್ಯೂ ಸೆಕ್ ನೀರನ್ನು ಹರಿದು ಬಿಡಲಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವರು 3000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ಸುಳ್ಳು ಹೇಳಿದ್ದಾರೆ, ನಿರಂತರವಾಗಿ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರು ಬರಿದಾಗಿದೆ, ಮತ್ತೆ 15 ದಿನ ನೀರು ಬಿಟ್ಟರೆ ರೈತರ ಗತಿಯೇನು, ?ಕುಡಿಯಲು ನೀರು ಸಿಗುವುದೇ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಚಂದ್ರಶೇಖರ್ ಶಿವಳ್ಳಿ, ಸುರೇಶ ಗೋಪಾಲಪುರ, ನಾಗರಾಜು ಚಿಕ್ಕಮಂಡ್ಯ, ದಿನೇಶ್, ಜವರೇಗೌಡ, ನಾಗರಾಜು ಗಾಣದಾಳು, ವಿಜಯಕುಮಾರ್, ಹೊಳಲು ಶಿವರಾಂ ಮತ್ತಿತರರಿದ್ದರು.