ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಗ್ರಾಮದ ಸೊಸೈಟಿ ಆವರಣದಲ್ಲಿ ಅಧ್ಯಕ್ಷ ನಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಬಿ. ರಾಮು ಮಾತನಾಡಿ, ಸಂಘದಲ್ಲಿ ಹೆಚ್ಚಿಗೆ ಪಶು ಆಹಾರ ಮತ್ತು ಗೊಬ್ಬರ ಖರೀದಿಸಿರುವ ಸದಸ್ಯರಿಗೆ ಬಹುಮಾನ ವಿತರಿಸಿ ಮಾತನಾಡಿ, ಡಾ. ಎಚ್. ಡಿ. ಚೌಡಯ್ಯ ಸ್ಥಾಪಿಸಿದ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಗಾಣದಾಳು, ಕೀಲಾರ, ಹೊಳಲು ಸಂಘಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಚೌಡಯ್ಯ, ಬೊಮ್ಮೇಗೌಡರ ಪರಿಶ್ರಮ ಹೆಚ್ಚಿತ್ತು ಎಂದು ಬಣ್ಣಿಸಿದರು.
ಸಹಕಾರ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಸಂಘದಲ್ಲಿ ಮಾರಾಟವಾಗುವ ಪಶು ಆಹಾರ, ಗೊಬ್ಬರ ಖರೀದಿಸುವುದರ ಜೊತೆಗೆ ಸಾಲ ಸೌಲಭ್ಯ ಪಡೆದು ನಿಗಧಿತ ಅವಧಿಯೊಳಗೆ ಮರುಪಾವತಿ ಮಾಡಿ ಇತರ ಸದಸ್ಯರಿಗೂ ಅನುಕೂ ಮಾಡಿಕೊಟ್ಟಲ್ಲಿ ಸಂಘ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಸಹಕಾರ ಸಂಘ ಸ್ಥಾಪನೆಯಾಗಿ ಮುಂದಿನ ತಿಂಗಳು 100 ವರ್ಷ ಪೂರೈಸುತ್ತದೆ. ಎಚ್.ಡಿ. ಚೌಡಯ್ಯನವರ ಮಾರ್ಗದರ್ಶನದಲ್ಲಿ ಸಂಘಕ್ಕೆ ಇದುವರೆಗೆ ಒಂದೇ ಒಂದು ಕಪ್ಪು ಚುಕ್ಕಿ ಅಂಟಿಕೊಂಡಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಅದೇ ರೀತಿ ಶತಮಾನೋತ್ಸವ ಪೂರೈಸಿದ ಸಂಘದ ಶತಮಾನೋತ್ಸವ ಆಚರಣೆಯನ್ನು ಎಲ್ಲರೂ ಕೂಡಿ ಸಂಭ್ರಮದಿಂದ ಆಚರಿಸಬೇಕಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಎಚ್.ಎನ್. ಲಿಂಗರಾಜಮ್ಮ, ಪಿಇಟಿ ಟ್ರಸ್ಟಿ ಎಚ್.ಸಿ. ಮೋಹನ್ಕುಮಾರ್, ವಕೀಲ ಎಚ್.ಎಂ. ವಿಜಯಕುಮಾರ್, ಗ್ರಾ.ಪಂ. ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಜಯಪ್ರಕಾಶ್, ಆರ್ಎಪಿಸಿಎಂಎಸ್ ನಿರ್ದೇಶಕ ಎಚ್.ಎಸ್. ಯೋಗೇಶ್ಕುಮಾರ್, ಮಾಜಿ ನಿರ್ದೇಶಕ ಎಚ್.ಸಿ. ಶ್ರೀಧರ್, ಡೈರಿ ಅಧ್ಯಕ್ಷ ಎಚ್.ಎನ್. ಉಮೇಶ್, ಶಿವರಾಜು, ಸಂಘದ ಸಿಇಓ ಕೆ.ಎಚ್. ಹರ್ಷವರ್ಧನ, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು, ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.