ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸೆ.23ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಡಾ. ಹೆಚ್.ಡಿ. ಚೌಡಯ್ಯ ಸಭಾಂಗಣದಲ್ಲಿ ಪರಿಚಯಾತ್ಮಕ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಇ.ಎಸ್.ಸಿ.ಇ ಪ್ರಾಂಶುಪಾಲ ಡಾ.ನಂಜುಂಡಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಡಾ.ಸಮರ್ಥ ನಾಗಭೂಷಣಂ (ಕಾರ್ಪೋರೇಟ್ ಲೀಡರ್, ಸೀರಿಯಲ್ ಎಂಟ್ರಪ್ಯೂನರ್, ಇನ್ವೆಸ್ಟರ್ ಇಂಡಿಯಾ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡುವರು. ಗೌರವ ಅತಿಥಿಗಳಾಗಿ ಇಸ್ರೋ ವಿಜ್ಞಾನಿಗಳಾದ ಪಿ ವಾಸುದೇವ ರಾವ್, ಕಮ್ರಾನ್ ಅಮದ್, ರವಿ ಟಿ ಅವರು ಭಾಗವಹಿಸುವರು ಎಂದು ಹೇಳಿದರು.
ಜನತಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಕೆ. ಎಸ್. ವಿಜಯ್ ಆನಂದ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಅಧ್ಯಕ್ಷತೆ ವಹಿಸುವರು. ಜನತಾ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಎಸ್. ಎಲ್. ಶಿವ ಪ್ರಸಾದ್ ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ ನಂಜುಂಡಸ್ವಾಮಿ ಮತ್ತು ಉಪ ಪ್ರಾಂಶುಪಾಲ ಡಾ. ವಿನಯ್ ಎಸ್ ಅವರು ಎಲ್ಲರನ್ನು ಸ್ವಾಗತಿಸಿ ಸಮಾರಂಭದ ಅತಿಥಿಗಳನ್ನು ಪರಿಚಯಿಸುವರು ಹಾಗೂ ಕಾಲೇಜಿನ ವತಿಯಿಂದ ಗಣ್ಯರನ್ನು ಅಭಿನಂದಿಸಲಾಗುವುದು. ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸುವರು ಎಂದು ವಿವರಿಸಿದರು.
ಕರ್ನಾಟಕ ಸರ್ಕಾರದ 10 ಅನುದಾನಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ಒಂದು ಮಹಾವಿದ್ಯಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ವಿದ್ಯಾಲಯವು 2008 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಸ್ವಾಯತ್ತತೆ ಪಡೆದು, ತದನಂತರ NBA, UGC, NAAC ಮತ್ತು AICTE ಯಿಂದ ಮಾನ್ಯತೆ ಪಡೆದಿದೆ, ಸಂಸ್ಥೆಯು 2023 ರಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಭಾರತೀಯ ಶ್ರೇಯಾಂಕದ ಪಟ್ಟಿಯಲ್ಲಿ 151 – 200 ನೇ ಬ್ಯಾಂಡ್ ಪಡೆದಿದೆ, ಪಿ.ಇ.ಎಸ್, ಇಂಜಿನಿಯರಿಂಗ್ ಕಾಲೇಜು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 11 ಸ್ನಾತಕ (ಬಿ, ಇ.) ಹಾಗೂ 6 ಸ್ನಾತಕೋತ್ತರ (ಎಂ.ಟೆಕ್, ಎಂ.ಬಿ.ಎ. ಎಂ.ಸಿ.ಎ) ಕೋಸ್ಗಳನ್ನು ನಡೆಸುತ್ತಿದ್ದು, ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉದ್ಯೋಗ ತರಬೇತಿ ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಎಂದು ವಿವರಿಸಿದರು.
ಈ ಸಂಸ್ಥೆಯು ತಾಂತ್ರಿಕ ಮತ್ತು ಆಡಳಿತ ಅಧ್ಯಯನ ವಿಷಯಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ತರಬೇತಿಯ ಜೊತೆಗೆ ಔದ್ಯೋಗಿಕ ಹಾಗೂ ಉದ್ಯಮ ಶೀಲತೆಯ ತರಭೆತಿಯನ್ನು ನೀಡುವ ಮೂಲಕ ಜಾಗತಿಕ ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ರಾಜ್ಯದಲ್ಲಿ ಒಂದು ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಹೇಳಿದರು.
ಗೋಷ್ಠಿಯಲ್ಲಿ ಕಾಲೇಜಿನ ಡೀನ್ (ಶೈಕ್ಷಣಿಕ) ಡಾ.ಬಿ.ದಿನೇಶ್ ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರ ಬಾಬು, ಉಪಡೀನ್ (ಶೈಕ್ಷಣಿಕ) ಡಾ.ಡಿ.ಆರ್.ಉಮೇಶ್, ಉಪ ಪರೀಕ್ಷಾ ನಿಯಂತ್ರಕ ಡಾ.ಚಂದ್ರಶೇಖರ್ ಹಾಗೂ ವೇಣುಗೋಪಾಲ್ ಉಪಸ್ಥಿತರಿದ್ದರು.