ಒಂದೂವರೆ ತಿಂಗಳ ಹಿಂದೆ ಕೊಳ್ಳೇಗಾಲ ಮೂಲದ ಕಾವೇರಿ ಗ್ರಾಮೀಣ ಬ್ಯಾಂಕ್ನ ಮ್ಯಾನೇಜರ್ ವೈ.ಎಂ.ಶೃತಿ ಮಂಡ್ಯದ ವಿನಾಯಕ ನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಇದೀಗ ಭಾರೀ ತಿರುವು ಪಡೆದುಕೊಂಡಿದೆ.
ಪ್ರಕರಣದ ಸಂಬಂಧ ಮೃತಳ ಪೋಷಕರು, ಬುಧವಾರ ಮಂಡ್ಯ ಡಿವೈಎಸ್ಪಿ ಕಚೇರಿಗೆ ಸಾಕ್ಷ್ಯಾಧಾರಗಳೊಂದಿಗೆ ತೆರಳಿ 6 ಪುಟಗಳ ಪೂರಕ ಲಿಖಿತ ದೂರು ಸಲ್ಲಿಸಿ ಕೊಲೆ ಆರೋಪ ಮಾಡಿದ್ದಾರೆ.
ಪ್ರಿಯಕರ ಜಗದೀಶ್ ಬಾಬು ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡಿದ ಪೋಷಕರು
ಮೃತ ವೈ.ಎಂ.ಶೃತಿ ತಂದೆ ಯಡದೊರೆ ಮಲ್ಲಪ್ಪ, ತನ್ನ ಪತ್ನಿ ಜಯಕಾಂತ ಹಾಗೂ ಹಿರಿಯ ಪುತ್ರಿ ವೈ.ಎಂ.ಶ್ವೇತಾ ಅವರೊಟ್ಟಿಗೆ ಡಿವೈಎಸ್ಪಿ ಜಿ.ಆರ್.ಶಿವಮೂರ್ತಿ ಅವರನ್ನು ಖುದ್ದು ಭೇಟಿ ಮಾಡಿ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸುವಂತೆ ಒತ್ತಾಯಿಸಿದರು. ಇದರೊಂದಿಗೆ ಮೃತಳು ಬಳಸುತ್ತಿದ್ದ ಲ್ಯಾಪ್ಟಾಪ್, ಮೊಬೈಲ್ ಫೋನ್, ಕ್ಯಾಮರ, ಬ್ಯಾಂಕ್ ಅಕೌಂಟ್ ದಾಖಲೆಗಳು, ಸಹೋದ್ಯೋಗಿ ಹಾಗೂ ಪ್ರಿಯಕರ ಜಗದೀಶ್ ಬಾಬು ಜತೆಗಿರುವ ಖಾಸಗಿ ಫೋಟೋಗಳು ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನು ಮತ್ತು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ದಿನದಂದು ಪೊಲೀಸರು, ನಮ್ಮ ಗೈರು ಹಾಜರಿಯಲ್ಲಿ ಮೃತ ಮಗಳ ಮನೆಯಲ್ಲಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ. ಅಲ್ಲದೇ, ಈ ಸಂದರ್ಭದಲ್ಲಿ ದೊರೆತಿದೆ ಎನ್ನಲಾದ ಡೆತ್ ನೋಟ್ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಡೆತ್ ನೋಟ್ ಬಗ್ಗೆ ಅನುಮಾನ
ತಮ್ಮ ಮೃತ ಪುತ್ರಿ ಉನ್ನತ ವಿದ್ಯಾಭ್ಯಾಸ ಹೊಂದಿದ್ದು, ಯಾವಾಗಲೂ ಇಂಗ್ಲಿಷ್ನಲ್ಲೇ ಸಹಿ ಮಾಡುತ್ತಿದ್ದಳು. ಆದರೆ, ಪೊಲೀಸಿನವರು ನೀಡಿರುವ ಡೆತ್ ನೋಟ್ನಲ್ಲಿ ಕನ್ನಡದಲ್ಲಿ ತನ್ನ ಅಡ್ಡ ಹೆಸರು ಪಿಂಕು ಎಂದು ಸಹಿ ಮಾಡಿದ್ದು ನಮಗೆ ಸಾಕಷ್ಟು ಅನುಮಾನ ಹುಟ್ಟಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೇ, ಮೃತ ಪುತ್ರಿಯ ಬಳಿ ಹಲವು ಬಾರಿ ಪ್ರಿಯಕರ ಆರೋಪಿ ಜಗದೀಶ್ ಬಾಬು ಮದುವೆಯಾಗುವುದಾಗಿ ನಂಬಿಸಿ, ಮಳವಳ್ಳಿ ತಾಲೂಕಿನ ಮಲ್ಲಿನಾಥಪುರದಲ್ಲಿ ನೂತನ ಮನೆ ನಿರ್ಮಿಸಲು 20 ಲಕ್ಷದಷ್ಟು ಹಣವನ್ನೂ ಸಹ ಪಡೆದುಕೊಂಡಿದ್ದಾನೆ. ಇದಕ್ಕೆ ಬ್ಯಾಂಕ್ ವಹಿವಾಟಿನ ದಾಖಲೆಗಳಿವೆ ಎಂದು ಹೇಳಿದ್ದಾರೆ.
ಆರೋಪಿಯು ಹಲವು ಬಾರಿ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ನನ್ನ ಮತ್ತು ನನ್ನ ಪತ್ನಿಯ ಬಳಿ ಖುದ್ದು ಅವಳೇ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ನಾವು ನೀಡಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಿ ಹೆಚ್ಚಿನ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಮೃತಳ ಪೋಷಕರಿಂದ ಪೂರಕ ದೂರು ಸ್ವೀಕರಿಸಿದ ಡಿವೈಎಸ್ಪಿ ಅಗತ್ಯ ತನಿಖೆ ಕೈಗೊಳ್ಳುವ ಭರವಸೆ ನೀಡಿದ್ದಾರೆ.