ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮುಂಬರುವ ಅ.5ರಂದು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಮಹಾರ್ಯಾಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಮಂಡ್ಯನಗರದಲ್ಲಿ ಇಂದು ಬೆಲೆ ಏರಿಕೆ, ನಿರುದ್ಯೋಗ, ಬಡತನ ಹೆಚ್ಚಳ ಖಂಡಿಸಿ ಮಂಡ್ಯ ನಗರದಲ್ಲಿ ಮಹಿಳಾ ಕಾರ್ಯಕರ್ತೆಯರು ಕಾಲ್ನಡಿಗೆ-ಬೈಕ್-ಟ್ರಾಕ್ಟರ್ ಜಾಗೃತಿ ಜಾಥಾ ಅಭಿಯಾನ ನಡೆಸಿದರು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಬೆಲೆ ಏರಿಕೆ, ನಿರುದ್ಯೋಗ, ಬಡತನ, ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ, ದೇಶದಲ್ಲಿ ಕೋಮುವಾದ ಉಲ್ಬಣವಾಗುತ್ತಿದ್ದರೂ ಕಾನೂನು ಕ್ರಮಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ, ವಿದೇಶದಲ್ಲಿರುವ ದೇಶೀಯರ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ಭೇಟಿ ಬಚಾವ್-ಭೇಟಿ ಪಢಾವ್ ಎಂದು ಘೋಷಣೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಆರ್ಥಿಕ ಬದುಕನ್ನೇ ಬುಡಮೇಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತಿದ್ದಾರೆ, ಬಡವರು ಮತ್ತಷ್ಟು ಬಡತನದ ಕೂಪಕ್ಕೆ ಬೀಳುತ್ತಿದ್ದಾರೆ, ಜೀವನ ಮಟ್ಟ ಸುದಾರಣೆ ಆಗುತ್ತಿಲ್ಲ, ಹಸಿವಿನಿಂದ ನರಳುವವರ ಸಂಖ್ಯೆ 2018ಕ್ಕಿಂತ 2022ರಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗಿದೆ, ಆದಾಯ ಕುಸಿತವಾಗಿದೆ, ಬೆಲೆ ಎರಿಕೆ ಆಗುತ್ತಿದೆ, ಇದಕ್ಕೆ ಬಿಜೆಪಿ ಜನವಿರೋಧಿ ನೀತಿಗಳೇ ಕಾರಣ ಎಂದು ಎಚ್ಚರಿಸಿದರು.
ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರದಂತೆ ಜನತೆ ಜಾಗೃತಿ ವಹಿಸಬೇಕು, ಬಿಜೆಪಿ ಸೋಲಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಜಮಾವಣೆಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಿಡಿಗೆ-ಬೈಕ್- ಟ್ರಾಕ್ಟರ್ ಜಾಗೃತಿ ಜಾಥಾ ಅಭಿಯಾನ ನಡೆಸಿ ಜೆಸಿವೃತ್ತದಲ್ಲಿ ಸಮಾಪ್ತಿಗೊಳಿಸಿದರು.
ಅಭಿಯಾನದಲ್ಲಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಡಿ.ಕೆ.ಲತಾ, ಖಜಾಂಚಿ ರಾಣಿ, ಕಾರ್ಯದರ್ಶಿ ಸುಶೀಲಾ, ಅಂಬ್ರನ್ ತಾಜ್, ಶಶಿಕಲಾ, ಮಹದೇವಮ್ಮ, ಮಹದೇವಿ, ರಾಜಲಕ್ಷ್ಮಿ ಮತ್ತಿತರರಿದ್ದರು.