ರೈತರು ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ಧದ ಲಸಿಕೆ ಹಾಕಿಸುವ ಮೂಲಕ ರಾಸುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ಎಚ್ಚರ ವಹಿಸಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ದದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಪಶು ಇಲಾಖೆ ಆಯೋಜಿಸಿರುವ ಕಾಲುಬಾಯಿ ಜ್ವರದ ವಿರುದ್ಧದ ಲಸಿಕೆ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದರು.
ಪಶು ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಡಾ.ಹಿಮಾಚಲ್ ಮಾತನಾಡಿ, ಕಾಲುಬಾಯಿ ಜ್ವರದ ವಿರುದ್ದದ ಲಸಿಕಾ ಅಭಿಯಾನವು ಇಂದಿನಿಂದ ಅಕ್ಟೋಬರ್ 25ರವರೆಗೆ ನಡೆಯಲಿದೆ. ತಾಲೂಕಿನಲ್ಲಿ 39 ಸಾವಿರ ಹಸುಗಳು ಹಾಗೂ 5700ಎಮ್ಮೆಗಳು ಸೇರಿದಂತೆ ಒಟ್ಟು 44,700 ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ದದ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಅಭಿಯಾನಕ್ಕಾಗಿ 32 ಲಸಿಕೆದಾರರು, 17 ಪಶು ಸಖಿಗಳು ಹಾಗೂ 7 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ದೇವೇಂದ್ರ, ಮಾಜಿ ಅಧ್ಯಕ್ಷ ಕೆ.ಜೆ.ಗಿರೀಶ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ವಿಶ್ವನಾಥ್, ಗ್ರಾ.ಪಂ ಉಪಾಧ್ಯಕ್ಷ ನಯನ, ಪಶು ವೈದ್ಯಾಧಿಕಾರಿಗಳಾದ ಡಾ.ದರ್ಶನ್, ಡಾ.ಕಾವ್ಯ, ಮನ್ ಮುಲ್ ನ ವೈದ್ಯರಾದ ಡಾ.ಪಾಟೀಲ್, ಪಶು ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ್, ಲೋಕೇಶ್, ಅನಿತಾಕುಮಾರಿ, ರಾಜಶೇಖರ್, ಕೊಂಡಯ್ಯ, ಸಚಿನ್, ಕದರೇಶ್ ಇತರರಿದ್ದರು.