ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಸೆ.29ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಂಡ್ಯ ನಗರದ ಪಾಲಿ ಕ್ಲಿನಿಕ್ ಆವರಣದಲ್ಲಿ ಉಚಿತ ರೇಬಿಸ್ ನಿರೋಧಕ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಸಿ.ಸುರೇಶ್ ಹಾಗೂ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎನ್.ಎಂ.ಸಿದ್ದರಾಮು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ನಿರೋಧಕ ಲಸಿಕೆ ಹಾಕಲಾಗುವುದು ಎಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೇಬಿಸ್ ಕಾಯಿಲೆಯು ಒಂದು ಭಯಾನಕ ಹಾಗೂ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಈಗಾಗಲೇ ನಾಯಿ ಅಥವಾ ಬೆಕ್ಕು ಕಚ್ಚಿದರೆ ಜನಸಾಮಾನ್ಯರು ಲಸಿಕೆ ಪಡೆಯುತ್ತಿದ್ದು ಒಂದು ವೇಳೆ ಲಸಿಕೆ ಪಡೆಯುವಲ್ಲಿ ತಡವಾದರೆ ಅಥವಾ ಉದಾಸೀನ ಮಾಡಿದರೆ ಮಾರಕ ಕಾಯಿಲೆಯು ಮನುಷ್ಯರಿಗೆ ಹರಡುತ್ತದೆ ಎಂದರು.
ಲಿಸ್ಸಾ ಎಂಬ ವೈರಾಣುವಿನಿಂದ ರೇಬಿಸ್ ಕಾಯಿಲೆ ಹರಡಲಿದ್ದು, ಎಲ್ಲ ಬಿಸಿ ರಕ್ತ ಪ್ರಾಣಿಗಳಲ್ಲೂ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು ನರವ್ಯೂಹ ಸಂಬಂಧಿ ರೋಗ. ಪ್ರತಿ ವರ್ಷ ಭಾರತದಲ್ಲಿ ಈ ರೋಗದಿಂದ 20ಸಾವಿರ ಜನ ಸಾಯುತ್ತಿದ್ದಾರೆ. ಎಲ್ಲಾ ಬಿಸಿ ರಕ್ತದ ಪ್ರಾಣಿಗಳು ಹಾಗೂ ಮನಷ್ಯರು ಈ ರೋಗಕ್ಕೆ ತುತ್ತಾಗಲಿದ್ದಾರೆ ಎಂದು ವಿವರಿಸಿದರು.
ಈ ಕಾಯಿಲೆ ಬಂದ ನಂತರ ಯಾವುದೇ ರೀತಿಯ ಚಿಕಿತ್ಸೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಿಗೆ ತಪ್ಪದೇ ರೇಬಿಸ್ ಕಾಯಿಲೆಯ ವಿರುದ್ಧ ಪಶು ಪಾಲನಾ ಇಲಾಖೆಯು ಶುಕ್ರವಾರದಂದು ಏರ್ಪಡಿಸಿರುವ ಉಚಿತ ರೇಬಿಸ್ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಈ ರೋಗಕ್ಕೆ ಸಂಪೂರ್ಣವಾಗಿ ರಕ್ಷಣೆಪಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಯಾಧ್ಯಂತ ಎಲ್ಲಾ ಪಶು ವೈದ್ಯ ಆಸ್ಪತ್ರೆಗಳಲ್ಲಿ ಉಚಿತ ರೇಬಿಸ್ ಲಸಿಕೆ ನೀಡಲಾಗುತ್ತದೆ. ಹೀಗಾಗಿ ಈಗಾಗಲೇ ಲಸಿಕೆಯನ್ನು ಪಡೆದಿರುವ ಸಾಕು ಪ್ರಾಣಿಗಳು ಕೂಡ ಈ ಲಸಿಕೆಯನ್ನು ಪಡೆಯಬಹುದಾಗಿದ್ದು,
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರೋಗ ಹರಡುವ ವಿಧಾನ
ರೇಬಿಸ್ ರೋಗವು ಹುಚ್ಚುನಾಯಿ ಕಚ್ಚುವುದರಿಂದ ಹರಡಲಿದೆ. ಹುಚ್ಚುನಾಯಿ ಗಾಯಗೊಂಡ ಚರ್ಮವನ್ನು ನೆಕ್ಕುವುದರಿಂದ ಅಥವಾ ಅದರ ಎಂಜಲು, ಗಾಯಗೊಂಡ ಚರ್ಮ ಅಥವಾ ಕಣ್ಣಿನ ಮೇಲೆ ಬಿದ್ದಾಗ ಹರಡುತ್ತದೆ. ರೋಗಗ್ರಸ್ತ ಬಾವುಲಿಯ ಕಡಿತ ಹಾಗೂ ಅದರ ಗುಹೆಯಲ್ಲಿ ಉಸಿರಾಡಿದಾಗ ಹಾಗೂ ಕಾಡು ಪ್ರಾಣಿಗಳ ಕಡಿತದಿಂದಲೂ ಈ ರೋಗ ಬರುತ್ತದೆ.
ಮುಂಜಾಗ್ರತೆ ಮತ್ತು ಚಿಕಿತ್ಸೆ
ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಮುಂಜಾಗ್ರತೆಯಾಗಿ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು. ಹುಚ್ಚುನಾಯಿ ಕಚ್ಚಿದ ತಕ್ಷಣ ಗಾಯವನ್ನು ಸಾಬೂನಿನಿಂದ ನೀರಿನಲ್ಲಿ ತೊಳೆಯಬೇಕು. ನಂತರ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಚುಚ್ಚು ಮದ್ದುಗಳನ್ನು ಹಾಕಿಸಿಕೊಳ್ಳಬೇಕು.