ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ ನಂತರವು ಕಾವೇರಿ ನದಿ ಪಾತ್ರದಲ್ಲಿ ಬಿದ್ದ ಅಲ್ಪ ಪ್ರಮಾಣದಿಂದಾಗಿ ಕೆ.ಆರ್.ಎಸ್. ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರಸ್ತುತ 100.36 ಅಡಿಗೆ ತಲುಪಿರುವುದು, ರೈತಾಪಿ ವರ್ಗಕ್ಕೆ ಸಮಾಧಾನ ತಂದಿದೆ.
ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 34 ದಿನಗಳ ಬಳಿಕ ಕೆಆರ್ಎಸ್ ಡ್ಯಾಂನ ನೀರಿನಮಟ್ಟ 100 ಅಡಿ ದಾಟಿದೆ.
ಈ ವರ್ಷ ಕನ್ನಂಬಾಡಿಯ ನೀರಿನ ಮಟ್ಟ 113 ಅಡಿಗೆ ತಲುಪಿತ್ತು, ಇದರಿಂದಾಗಿ ಒಂದು ಬೆಳೆಗೆ ಮೋಸವಿಲ್ಲ ಎಂದು ರೈತರು ನಂಬಿದ್ದರು, ಆದರೆ ಇದೇ ಸಂದರ್ಭದಲ್ಲಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ, ತಮಗೆ ಕರ್ನಾಟಕವು ನಿರ್ದಿಷ್ಟ ಪ್ರಮಾಣದ ನೀರು ಬಿಡುತ್ತಿಲ್ಲ ಎಂದು ಮನವಿ ಸಲ್ಲಿಸಿತು, ಇದರ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಹಾಗೂ ಕಾವೇರಿ ನದಿ ನೀರು ಪ್ರಾಧಿಕಾರವು ಹಂತ ಹಂತವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುತ್ತಲೇ ಬಂದವು, ಇದರಿಂದಾಗಿ ಕೆ.ಆರ್.ಎಸ್. ನೀರಿನ ಮಟ್ಟ 97 ಅಡಿಗೆ ಕುಸಿತವಾಗಿತ್ತು. ಆದರೆ ಇತ್ತೀಚೆಗೆ ಸುರಿದ ಸ್ಪಲ್ಪ ಪ್ರಮಾಣದ ಮಳೆಯಿಂದಾಗಿ 3 ಅಡಿ ಹೆಚ್ಚಳವಾಗಿ 100.36 ಅಡಿಗೆ ತಲುಪಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ.
ಇಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ಕೆ.ಆರ್.ಎಸ್ ಅಣೆಕಟ್ಟೆಯ ಒಳಹರಿವು 9,052 ಕ್ಯೂಸೆಕ್ ಇದ್ದರೆ, ಹೊರ ಹರಿವು 1483 ಕ್ಯೂಸೆಕ್ ದಾಖಲಾಗಿದೆ.