ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕರುನಾಡ ವಿಜಯ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ ಸೇನೆಯ ಕಾರ್ಯಕರ್ತರು ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ ಮೆರವಣಿಗೆ ಹೊರಟು ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿ ಬೆಂಬಲಿಸಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.
ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವ ಸರ್ಕಾರ ರಾಜ್ಯದ ಹಿತವನ್ನು ಮರೆತಿದೆ, ಈಗಾಗಲೇ ರೈತರ ಬೆಳೆಗಳಿಗೆ ನೀರು ನೀಡದೆ ಅವರ ಭವಿಷ್ಯವನ್ನು ಹಾಳು ಮಾಡಿದ್ದಲ್ಲದೆ, ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಕುಡಿಯಲು ನೀರು ಇಲ್ಲದಂತೆ ಮಾಡಲು ಹೊರಟಿದೆ, ತಕ್ಷಣ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಿದರು.
ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸ ಬೇಕು, ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು,ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡಿ ಯೋಜನೆ ಸಾಕಾರಕ್ಕೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಬರದನಾಡು ಚಿತ್ರದುರ್ಗದಿಂದ ಟ್ಯಾಂಕರ್ ನಲ್ಲಿ ತಂದಿದ್ದ ನೀರನ್ನು ಜಿಲ್ಲಾಡಳಿತ ಮೂಲಕ ತಮಿಳುನಾಡಿಗೆ ರವಾನಿಸಲು ಮುಂದಾಗಿದ್ದ ಪ್ರತಿಭಟನಾಕಾರ ರಿಂದ ಅಧಿಕಾರಿ ಹಾಗೂ ಪೊಲೀಸರು ನೀರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ರೈತ ಹಿತ ರಕ್ಷಣಾ ಸಮಿತಿ ಮುಖಂಡರು ನೀರನ್ನು ಸ್ವೀಕರಿಸಿದರು.
ಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಆಳುವ ಸರ್ಕಾರ ಮತ್ತು ರಾಜಕಾರಣಿಗಳು ನಾಟಕ ಮಾಡುತ್ತಿದ್ದಾರೆ, ಜನರ ಹೋರಾಟದ ಕಿಚ್ಚು ಇದ್ದರೂ ಸಹ ಇವರ ನಾಟಕೀಯ ವರ್ತನೆ ನಿಂತಿಲ್ಲ, ಧೀಮಂತ ರಾಜಕಾರಣಿ ಬಂಗಾರಪ್ಪ ಬಿಟ್ಟ ನಿಲುವು ಕೈಗೊಂಡ ಏಕೈಕ ನಾಯಕರಾಗಿದ್ದಾರೆ, ಎಂತಹದೇ ಇದ್ದರೂ ಪರಿಸ್ಥಿತಿಯನ್ನು ನೋಡಬೇಕಾಗಿದೆ ಎಂದರು.
ನಾವು ಇಲ್ಲಿ ಕುಡಿಯುವ ನೀರಿಗೆ ಹೋರಾಟ ಮಾಡುತ್ತಿದ್ದರೆ, ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿದೆ, ಕೂಡಲೇ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತರ ಹಿತವೇ ಮುಖ್ಯವಾಗಬೇಕು, ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದ ಮೇಲೆ ಯಾವ ನಿರ್ಧಾರ ಕೈಗೊಂಡರೆ ಏನು, ಕಾವೇರಿ ಹೋರಾಟಕ್ಕೆ ನಿರಂತರ ಬೆಂಬಲ ನೀಡುವುದಾಗಿ ತಿಳಿಸಿದರು.
ಸೇನೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ರಾಮ್ ಪ್ರಸಾದ್ ರಾಜ್ಯ ಕಾರ್ಯದರ್ಶಿ ಗಿರಿಜೇಶ್, ಯುವ ಘಟಕದ ರಾಜ್ಯಾಧ್ಯಕ್ಷ ಆರ್ ಎಸ್ ಮಹೇಶ್, ನವೀನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ ವೆಂಕಟೇಶ್, ಬೋರ್ ವೆಲ್ ನಾರಾಯಣ್ ನೇತೃತ್ವ ವಹಿಸಿದ್ದರು