ಶಿವಮೊಗ್ಗದ ರಾಗಿಗುಡ್ಡ ಗಲಭೆ ವೇಳೆ ಕರ್ತವ್ಯ ಲೋಪ ಎಸೆಗಿದ ಆರೋಪದ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯ ಸಿಪಿಐ ಅಭಯ್ ಪ್ರಕಾಶ್, ಸಿಬ್ಬಂದಿಗಳಾದ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಅವರನ್ನು ಅಮಾನತು ಮಾಡಲಾಗಿದೆ. ಕಲ್ಲು ತೂರಾಟ ಪ್ರಕರಣ ಹಿನ್ನೆಲೆ ಇವರು ಸರಿಯಾಗಿ ಕರ್ತವ್ಯ ನಿಭಾಯಿಸಿಲ್ಲ ಎಂದು ಅಮಾನತು ಮಾಡಲಾಗಿದೆ.
ಅ.1ರಂದು ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿತ್ತು. ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ 8 ಮಂದಿ ಗಾಯಗೊಂಡಿದ್ದರು. ಆ ಬಳಿಕ ನಗರದಲ್ಲಿ 144 ಸೆಕ್ಸನ್ ಜಾರಿಗೊಳಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 60 ಜನರ ಬಂಧನವಾಗಿತ್ತು ಮತ್ತು 24 ಎಫ್ಐಆರ್ಗಳು ದಾಖಲಾಗಿತ್ತು.
ಶಿವಮೊಗ್ಗ ರಾಗಿಗುಡ್ಡ ಗಲಭೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಕಲ್ಲು ತೂರಾಟದ ಬಳಿಕ ನಗರದಲ್ಲಿ ಪೊಲೀಸರು ಹೆಚ್ಚಿನ ಕಣ್ಗಾವಲನ್ನು ಇಟ್ಟಿದ್ದು ಶಾಂತಿ- ಮರುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.