ಮಂಡ್ಯನಗರದ ಪೋಸ್ಟ್ ಆಫೀಸ್ ಮುಂಭಾಗ ಹಾಗೂ ಹೊಳಲು ಸರ್ಕಲ್ ಬಳಿ ರೇಬಿಸ್ ನಿಯಂತ್ರಣ ಜಾಗೃತಿ ಮೂಡಿಸುವ ಎರಡು ಬೀದಿ ನಾಟಕ ಕಾರ್ಯಕ್ರಮಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯ ಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ರೋಟರಿ ಮಂಡ್ಯ, ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ, ಇದಕ್ಕೆ ಲಭ್ಯವಿರುವ ಲಸಿಕೆಗಳ ಬಗ್ಗೆ, ಕಚ್ಚಿದ ತಕ್ಷಣ ಮಾಡಬೇಕಾದಂತ ಪ್ರಥಮ ಚಿಕಿತ್ಸೆ ಬಗ್ಗೆ, ಮೂಢನಂಬಿಕೆಗಳಿಗೆ ಒಳಗಾಗುವುದನ್ನು ತಪ್ಪಿಸುವ ಬಗ್ಗೆ, ತಮ್ಮ ಮನೋಜ್ಞ ಅಭಿನಯದ ಬೀದಿ ನಾಟಕದ ಮೂಲಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
ಈ ಬೀದಿ ನಾಟಕವನ್ನು ಮಂಡ್ಯ ನಗರ ಹಾಗೂ ಗ್ರಾಮಾಂತರ ಭಾಗದ ನೂರಾರು ಜನ ಸಾರ್ವಜನಿಕರು ವೀಕ್ಷಿಸಿ ಈ ಕಾರ್ಯಕ್ರಮದಿಂದ ತಮಗೆ ಜ್ಞಾನೋದಯವಾಗಿದೆ, ಇನ್ನು ಮುಂದೆ ನಾಯಿ ಕಚ್ಚುವುದನ್ನು ತಡೆಯಲು ಪ್ರಯತ್ನ ಮಾಡುತ್ತೇವೆ, ಒಂದು ಪಕ್ಷ ಕಚ್ಚಿಸಿಕೊಂಡರೆ ತಕ್ಷಣ ಹತ್ತಿರ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್. ಹೆಚ್, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹರೀಶ್, ಸಹ ಪ್ರಾಧ್ಯಾಪಕರಾದ ಡಾ. ಸುಭಾಷ್ ಬಾಬು ಪಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಜಾಹ್ನವಿ ರಾಜಗೋಪಾಲ್, ಡಾ.ಸಿದ್ದಲಿಂಗಪ್ಪ ಹೂಗಾರ್, ಡಾ.ಪೂರ್ಣಿಮಾ, ಡಾ.ಮಂಜುನಾಥ್, ಪ್ರೊಫೆಸರ್ ನಾಗರಾಜ್ ಗೌಡ, ಜಿಲ್ಲಾ ಸಲಹೆಗಾರರಾದ ತಿಮ್ಮರಾಜು, ಡಾಟಾ ಮ್ಯಾನೇಜರ್ ಆನಂದ್, ಸಮಾಜ ಕಾರ್ಯಕರ್ತರಾದ ಮೋಹನ್, ರೋಟರಿ ಮಂಡ್ಯದ ಅಧ್ಯಕ್ಷರಾದ ಅನುಪಮಾ, ಲಕ್ಕಪ್ಪಗೌಡ, ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.