ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದ ದೊಡ್ಡಕೆರೆಯ ತೂಬಿನ ಬಳಿ ಕೋಡಿ ಒಡೆದು ಕೆರೆಯಲ್ಲಿ ಸಂಗ್ರಹವಾಗಿದ್ದ ನೀರು ಏಕಾಏಕಿ ಹೊರಕ್ಕೆ ನುಗ್ಗಿದ್ದರಿಂದ ಬೆಳೆಗಳು ಜಲಾವೃತವಾಗಿರುವ ಘಟನೆ ಗುರುವಾರ ನಡೆದಿದೆ.
ಕಳೆದ ರಾತ್ರಿ ಸುರಿದ ಧಾರಕಾರ ಮಳೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಶಿಥಿಲಗೊಂಡಿದ್ದ ತೂಬು ಬಳಿಯ ಕಾಂಕ್ರೀಟ್ ತಡೆಗೋಡೆ ಒಡೆದು ನೀರೆಲ್ಲ ಗದ್ದೆಗಳಿಗೆ ನುಗ್ಗಿದೆ. ಇದರಿಂದ ಕೆರೆಯ ಕೆಳಭಾಗದಲ್ಲಿ ಬೆಳೆದಿದ್ದ ಭತ್ತ, ಕಬ್ಬಿನ ಫಸಲುಗಳು ಜಲಾವೃತಗೊಂಡು ನಷ್ಟ ಉಂಟಾಗಿದೆ.
ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನೀರು ಪೋಲಾಗುತ್ತಿರುದನ್ನು ಕಂಡ ರೈತರು, ಕೂಡಲೇ ನೀರು ಪೋಲಾಗುವುದನ್ನು ತಡೆಯುವಂತೆ ಮನವಿ ಸಲ್ಲಿಸಿದರು.
ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್, ಕಿರಿಯ ಇಂಜಿನಿಯರ್ ಕೆಂಪರಾಜು, ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.