ರಾಜ್ಯ ಬೌದ್ಧ ಯುವ ಸಮ್ಮೇಳನ 67ನೇ ಧಮ್ಮ ದೀಕ್ಷಾ ಸಮಾವೇಶದಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದ 300ಕ್ಕೂ ಹೆಚ್ಚು ವಿವಿಧ ಜಾತಿಗಳ ಜನರು ಬೌದ್ಧ ಧಮ್ಮವನ್ನು ಸ್ವೀಕರಿಸಿದರು.
ಬೆಂಗಳೂರಿನ ಸದಾಶಿವನಗರದ ನಾಗಸೇನಾ ಬುದ್ಧವಿಹಾರದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ 300ಕ್ಕೂ ಹೆಚ್ಚು ವಿವಿಧ ಜಾತಿಗಳ ಜನರು ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದಾರೆ. ಧಮ್ಮ ದೀಕ್ಷೆ ಪಡೆದವರಿಗೆ ನಾಗಪುರದ ಅಶೋಕ ಬೌದ್ಧ ವಿಹಾರದ ವಿನಯರಖ್ಖಿತ ಮಹಾಥೆರೋ ಅವರು ಅಂಬೇಡ್ಕರ್ ಅನುಸರಿಸಿದ್ದ 21 ಅಂಶಗಳನ್ನು ಬೋಧಿಸಿದರು.
ಧಮ್ಮ ದೀಕ್ಷಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬೌದ್ಧ ಧಮ್ಮ ಶೋಷಿತ ಸಮುದಾಯಗಳ ವಿಮೋಚನಾ ಮಾರ್ಗವಾಗಿದೆ. ಬೌದ್ಧ ಧಮ್ಮ ಕುರಿತು ಅಧ್ಯಯನ ಮಾಡಿದ್ದ ಬಿ.ಆರ್. ಅಂಬೇಡ್ಕರ್ ಅವರು ಕೊನೆಗೆ ಅದೇ ಧಮ್ಮ ಸ್ವೀಕರಿಸಿದರು. ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರ್ ಅವರ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಬುದ್ಧಿಸ್ಟ್ ಸಂಘ, ಕರ್ನಾಟಕ ಬುದ್ಧ ಸಮಾಜ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಹಾಗೂ ಸಮ್ಯಕ್ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು.
ಈ ವೇಳೆ ಬೀದರ್ನ ಅಣಬೂರು ಬುದ್ಧ ವಿಹಾರದ ದಮ್ಮಾನಂದ ಮಹಾಥೆರೋ, ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಬೋಧಿದತ್ತ ಥೆರೋ, ನಾಗಸೇನಾ ಬುದ್ಧ ವಿಹಾರದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಬಿಕ್ಕುಣಿ ಬುದ್ಧಮ್ಮ, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ. ಮಹೇಶ್, ಬಿಎಸ್ಐ ಕರ್ನಾಟಕದ ಅಧ್ಯಕ್ಷ ಸಾಕೆ ಶಾಮು, ನಿವೃತ್ತ ಐಎಎಸ್ ಅಧಿಕಾರಿಗಳಾದ ಎಚ್.ಸಿದ್ದಯ್ಯ, ಬಾಬುರಾವ್ ಮುಡುಬಿ, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ಸೇರಿ ಹಲವರು ಉಪಸ್ಥಿತರಿದ್ದರು.