ಮಾನವನಿಗೆ ಬರುವ ಹಲವು ಖಾಯಿಲೆಗಳಿಗೆ ಸ್ವಚ್ಚವಿರದ ಕೈಗಳು ಕಾರಣ ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ಕೈತೊಳೆಯುವ ಅಭ್ಯಾಸ ರೂಢಿ ಮಾಡಿಕೊಳ್ಳುವುದರ ಮೂಲಕ ರೋಗ ಗಳಿಂದ ದೂರ ಇರಬಹುದೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಹೇಳಿದರು.
ಅವರು ಪಟ್ಟಣದ ಪುರಸಭೆಯ ವ್ಯಾಪ್ತಿಯ10 ನೆಯ ವಾರ್ಡಿನ ಗಾಂಧಿ ನಗರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಆಯೋಜಿಸಿದ್ದ,”ವಿಶ್ವ ಕೈ ತೊಳೆಯುವ ದಿನ”ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 15 ರಂದು ಜಾಗತಿಕವಾಗಿ ಕೈ ತೊಳೆಯುವ ದಿನ ಆಚರಿಸಲಾಗುತ್ತಿದೆ “ಸ್ವಚ್ಚ ಕೈಗಳು ಕೈಗೆಟುಕುವವು” ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ.
ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿ ಸಾಬೂನಿನಿಂದ ಕೈ ತೊಳೆದುಕೊಂಡು ತಮ್ಮ ಆರೋಗ್ಯ ಮತ್ತು ಇತರರ ಆರೋಗ್ಯ ಕಾಪಾಡಿಕೊಳ್ಳಬೇಕು.ಕೈ ತೊಳೆಯದೆ ಆಹಾರ ಸ್ವೀಕರಿಸುವದರಿಂದ ಅನೇಕ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ನಮಗೆ ಗೊತ್ತಿಲ್ಲದೆ ಬಾಯಿಯ ಮೂಲಕ ಹೊಟ್ಟೆ ಸೇರಿ ಕಾಯಿಲೆ ತರುತ್ತವೆ ಅದರಲ್ಲೂ ಮಕ್ಕಳಲ್ಲಿ ಅತಿಸಾರ ಬೇಧಿ ಹಾಗೂ ನ್ಯುಮೋನಿಯಾದಂತಹ ಕಾಯಿಲೆಗಳು ಮಕ್ಕಳಲ್ಲಿ ಕಾಣಿಸಿ ಕೊಳ್ಳುತ್ತವೆ. ಹಾಗಾಗಿ ಶೌಚಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮೊದಲು, ಅಡುಗೆ ಮಾಡುವ ಪೂರ್ವದಲ್ಲಿ, ಧೂಳದ ವಸ್ತು ಮುಟ್ಟಿದಾಗ, ಕೆಮ್ಮಿದಾಗ, ಸೀನಿದಾಗ ಕಡ್ಡಾಯವಾಗಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು ಸರಿಯಾಗಿ ಕೈ ತೊಳೆಯುವದರಿಂದ ಉಸಿರಾಟ ಮತ್ತು ಕರುಳಿನ ಖಾಯಿಲೆಯ ಶೇಕಡಾ 25 ರಿಂದ 50 ರಷ್ಟು ಖಾಯಿಲೆಗಳನ್ನು ಕೂಡ ತಡೆಗಟ್ಟಬಹುದಾಗಿದೆ ಎಂದು ಸಲಹೆ ನೀಡಿದರು.
ನಂತರ ವೈಜ್ಞಾನಿಕ ಕೈತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಅರಿವು ಮೂಡಿಸಿದರು.
ಸದರಿ ವೇಳೆ ತಾಯಂದಿರರು ಹಾಗೂ ಶಾಲಾ ಮಕ್ಕಳು ಹಾಗೂ ಆಶಾ ಕಾರ್ಯಕರ್ತೆ ಮೀನಾ ಹಾಜರಿದ್ದರು.