ಕಾವೇರಿ ವಿಚಾರದಲ್ಲಿ ರಾಜ್ಯದ ನಿರಂತರವಾದ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸುವುದಕ್ಕಾಗಿ ಪ್ರಧಾನಿ ನರೇಂದ್ರಮೋದಿಯವರ ಮಧ್ಯಸ್ಥಿಕೆಯಲ್ಲಿ ರಾಷ್ಟ್ರೀಯ ಜಲನೀತಿ ರೂಪಿಸಿ, ಜಾರಿಗೆ ತರಬೇಕೆಂದು ಕೂಡಲಸಂಗಮದ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಶರಣರು ಒತ್ತಾಯಿಸಿದರು.
ಮಂಡ್ಯದಲ್ಲಿ ಕಳೆದ 46 ದಿನಗಳಿಂದ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಾವು ಕುಡಿಯುವದಕ್ಕೆ ನೀರು ಕೇಳುತ್ತಿದ್ದೇವೆ, ಆದರೆ ತಮಿಳುನಾಡು ಬೆಳೆ ಬೆಳೆಯುವುದಕ್ಕೆ ನೀರು ಕೇಳುತ್ತಿದೆ, ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾದದ್ದು, ಕಾವೇರಿ ನದಿ ನೀರು ಪ್ರಾಧಿಕಾರದ ಕರ್ತವ್ಯವಾಗಬೇಕು. ಆದರೆ ಪ್ರಾಧಿಕಾರದ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅಧ್ಯಯನ ನಡೆಸದೇ ನೀರು ಬಿಡಿ ಎನ್ನುವ ಆದೇಶ ನೀಡುತ್ತಿದ್ದಾರೆಂದು ದೂರಿದರು.
ಇದಕ್ಕೂ ಮುನ್ನ ಮಂಡ್ಯಕ್ಕೆ ಆಗಮಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಗರದ ಸಂಜಯ ವೃತದಿಂದ ರೈತರ ಜೊತೆಗೂಡಿ ಎತ್ತಿನಗಾಡಿ ಏರಿ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆ ಹೋರಾಟಗಾರರು, ಕೇಂದ್ರ- ರಾಜ್ಯ ಸರ್ಕಾರ, ಶಾಸಕ, ಸಂಸದರು ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲವಾಗಿ ನಿಂತರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಧರಣಿ ಸ್ಥಳದವರೆಗೆ ಎತ್ತಿನಗಾಡಿಯಲ್ಲಿ ನಿಂತು ಸಾಗಿದ ಶ್ರೀಗಳು ಕಾವೇರಿ ಹೋರಾಟ ಬೆಂಬಲಿಸಿ ರೈತರ ಜೊತೆ ನಿರಂತರವಾಗಿ ನಿಲ್ಲುವುದಾಗಿ ಘೋಷಿಸಿದರು. ಆಳುವ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದ ಅವರು ಕದ್ದು ಮುಚ್ಚಿ ನೀರು ಬಿಡುಗಡೆ ಮಾಡುತ್ತಿರುವ ಸರ್ಕಾರದ ವಿರುದ್ಧ ಕಿಡಿಕಾರಿದರು