ವರದಿ : ಪ್ರಭು ವಿ ಎಸ್
ಮಾ.12 ರ ಭಾನುವಾರ ದಂದು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ಕಾರ್ಯಕ್ರಮದ ಸಿದ್ದತೆ ಕಾರ್ಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಜನಪ್ರತಿನಿಧಿಗಳ ಜೊತೆ ಪರಿಶೀಲಿಸಿ ಪೂರ್ವಭಾವಿ ಸಭೆ ನಡೆಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹೀಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಧಿಕಾರಿಗಳ ಮತ್ತು ಬಿಜೆಪಿ ಮುಖಂಡರ ಸಭೆ ನಡೆಸಿದರು.
ಬಳಿಕ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಪಥ ಹೆದ್ದಾರಿ ಉದ್ಘಾಟನೆ ನಂತರ ಬೃಹತ್ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ಭರ್ಜರಿ ಯಶಸ್ಸು ಕಾಣಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈಗಾಗಲೇ ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಬೃಹತ್ ಸಮಾವೇಶಗಳು ನಡೆದಿವೆ. ಆ ಎರಡು ಕಾರ್ಯಕ್ರಮಗಳಿಗಿಂತ ಮಂಡ್ಯದ ಕಾರ್ಯಕ್ರಮಗಳಿಗಿಂತ ಬಹುದೊಡ್ಡ ಕಾರ್ಯಕ್ರಮವಾಗಬೇಕು. ಹೀಗಾಗಿ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಕಾರ್ಯಕರ್ತರನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದರು.
ಕಾಂಗ್ರೆಸ್ 500 ರೂ
ಕಾಂಗ್ರೆಸ್ ಕಾರ್ಯಕ್ರಮಗಳಿಗೆ 500 ರೂ. ಕೊಟ್ಟು ಕರೆತನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ, ನಮ್ಮ ಪಕ್ಷದಲ್ಲಿ ಯಾವ ಕಾಲಕ್ಕೂ ಆ ರೀತಿ ಮಾಡಿಲ್ಲ, ನಮ್ಮ ಪಕ್ಷದಲ್ಲಿ ಮೋದಿ, ಅಮಿತ್ ಶಾ ಬಂದರೇ ಕಾರ್ಯಕರ್ತರು ತಾವಾಗಿಯೇ ಬರ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಸುಮಲತಾ
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಜಿಲ್ಲೆಗೆ ನಮ್ಮ ಹೆಮ್ಮೆಯ ಪ್ರಧಾನಿಗಳು ಬರ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ರೋಡ್ ಶೋಗಳಿಗಿಂತ ಬೆಸ್ಟ್ ಶೋ ಆಗಬೇಕು. ಇಡೀ ದೇಶವೇ ಮಂಡ್ಯ ಜಿಲ್ಲೆಯನ್ನು ತಿರುಗಿ ನೋಡುವಂತೆ ಮಾಡಬೇಕು ಎಂದರು.
ಪ್ರತಾಪ್ ಸಿಂಹ
ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ದಶಪಥ ಹೆದ್ದಾರಿಗೆ ಮಂಡ್ಯ ಜನರ ಬಹುದೊಡ್ಡ ಕೊಡುಗೆ ಇದೆ. ಹೆದ್ದಾರಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಈಗಾಗಲೇ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪಾಸ್ ಪೋರ್ಟ್ ಸೇವಾ ಕೇಂದ್ರ ಹಾಗೂ ಮುಂದಿನ ದಿನಗಳಲ್ಲಿ ಇಂಗ್ಲೇಂಡ್ ಕಂಟೆನರ್ ಡಿಪೋ ಕೂಡ ಜಿಲ್ಲೆಗೆ ಕಾಲಿಡಲಿದೆ. ಹೀಗೆ ಇನ್ನು ಹಲವಾರು ಕೊಡುಗೆಗಳನ್ನು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ನೀಡಿದೆ. ಇಷ್ಟೆಲ್ಲಾ ಯೋಜನೆಗಳನ್ನು ನೀಡಿದ್ದರೆ, ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡ್ರು ಮಾತ್ರ ಬಿಜೆಪಿ ಬಾವುಟವನ್ನು ಹಾರಿಸಿದ್ದಾರೆ. ಜಿಲ್ಲೆಗೆ ನರೇಂದ್ರ ಮೋದಿ ಅವರು ಶಕ್ತಿ ತುಂಬಲು ಬರಿತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಕೂಡ ಬಿಜೆಪಿ ಬಾವುಟವನ್ನು ಹಾರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ, ಕ್ರೀಡಾ ಸಚಿವ ನಾರಾಯಣ ಗೌಡ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ತಾಲ್ಲೂಕು ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ರೂಪ, ಫೈಟರ್ ರವಿ ಸೇರಿದಂತೆ ಇತರರಿದ್ದರು.