ವರ್ಷಕ್ಕೊಮೆ ಅಯುಧಪೂಜೆ ದಿನದಲ್ಲಿ ಎಲ್ಲಾ ರೀತಿಯ ಸಾಮಾಗ್ರಿ, ಮೋಟಾರು ವಾಹನಗಳು, ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ, ಈ ಸಂಭ್ರಮಕ್ಕಾಗಿ ಭಾನುವಾರ ಮಂಡ್ಯನಗರದಲ್ಲಿ ಎಲ್ಲೆಡೆ ಖರೀದಿ ಭರಾಟೆ ಜೋರಾಗಿತ್ತು.
ಮಹಿಳೆಯರು ಮನೆ ಹಾಗೂ ಹೊರ ಆವರಣವನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರೆ, ಪುರುಷರು, ಮಕ್ಕಳು ವಾಹನಗಳನ್ನು ತೊಳೆದರು. ಅಂಗಡಿಗಳು, ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಬೆಳಿಗ್ಗೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಹಬ್ಬದ ಖರೀದಿಗಾಗಿ ಜನತೆ ಮುಗಿಬಿದ್ದಿದ್ದರಿಂದ ಮಂಡ್ಯನಗರದೆಲ್ಲೆಡೆ ಜನಸಾಗರವೇ ಕಂಡು ಬಂತು. ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನತೆ ತೊಡಗಿದರು. ಮಧ್ಯಾಹ್ನದ ನಂತರ ಜನರ ಸಂಖ್ಯೆ ಹೆಚ್ಚಾಯಿತು. ಸಂಜೆಯ ಹೊತ್ತು ವಿಪರೀತವಾಗಿತ್ತು.
ಬಾಳೆಕಂದು-ಬೂದುಗುಂಬಳಕ್ಕೆ ಬೇಡಿಕೆ
ಆಯುಧಪೂಜೆಗಾಗಿ ಹೂವು, ನಿಂಬೆ ಹಣ್ಣು, ಬೂದುಕುಂಬಳಕಾಯಿ, ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು ಹಂಪಲು, ಅರಿಸಿನ, ಕುಂಕುಮ ಸೇರಿದಂತೆ ಇತರೆ ವಸ್ತುಗಳ ಖರೀದಿ ನಡೆಯಿತು. ಕಚೇರಿ, ವಾಹನಗಳಿಗೆ ಬೂದುಗುಂಬಳ ಒಡೆಯುವುದು, ಬಾಳೆಕಂದುಗಳನ್ನು ಕಟ್ಟಿ ಸಿಂಗರಿಸುವುದರಿಂದ ಅವುಗಳ ಬೇಡಿಕೆ ಹೆಚ್ಚಾಗಿತ್ತು.
ರಸ್ತೆಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆ ಹಣ್ಣುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳು, ಅಂಗಡಿಗಳನ್ನು ಅಲಕರಿಸಲು ಬಳಸುವ ಕೃತಕ ಹಾರಗಳು, ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು. ಎಲ್ಲೆಡೆ ಚೋಕಾಸಿ ಮಾಡಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದದ್ದು ಕಂಡು ಬಂತು.