ಮಂಡ್ಯನಗರದ ಕಾಳಿಕಾಂಭ ದೇವಾಲಯದಿಂದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಲಕಾವೇರಿಗೆ ಮಂಗಳವಾರ ಜಾಥಾ ಹೊರಟರು.
ಈ ಸಂದರ್ಭದಲ್ಲಿ ಕರವೇ ಮುಖಂಡರ ಡಿ.ಅಶೋಕ್ ಮಾತನಾಡಿ, ರಾಜ್ಯ ಸರ್ಕಾರವು ರೈತರ ಹಿತವನ್ನು ಕಾಯಬೇಕು, ರೈತ ವಿರೋಧಿ ನೀತಿಗಳನ್ನು ಕೈ ಬಿಡಬೇಕು, ನಾಡು-ನುಡಿಗಾಗಿ ಹೋರಾಟ ನಡೆಸಿದ ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರೈತರ ಜೀವನಾಡಿ ತಲಕಾವೇರಿ ಯಿಂದ ಉಗಮಗೊಂಡು ನದಿಗಳ ಮೂಲಕ ಕಾವೇರಿ ನೀರು ನೆರೆ ರಾಜ್ಯ ತಮಿಳುನಾಡು ಸೇರುತ್ತಿದೆ. ಆದರೆ, ತಮಿಳುನಾಡು ಕಾವೇರಿ ನೀರನ್ನು ಸರಿಯಾಗಿ ಬಳಸಿಕೊಳ್ಳದೆ ಬಂಗಾಳ ಕೊಲ್ಲಿ ಸಾಗರಕ್ಕೆ ಬಿಡುತ್ತಿದೆ. ಆದರೆ, ಕಾವೇರಿ ನೀರಿನ ವಿಚಾರವಾಗಿ ಪದೇ ಪದೇ ಕರ್ನಾಟಕದೊಂದಿಗೆ ಕ್ಯಾತೆ ತೆಗೆದು ವಿವಾದ ಸೃಷ್ಟಿಸಿದೆ, ಕಾವೇರಿ ನದಿ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಮೇಕೆದಾಟು ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲಿ ಎಂದು ಅಗ್ರಹಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ನೂರಾರು ಕಾರ್ಯಕರ್ತರೊಂದಿಗೆ ತಲಕಾವೇರಿಗೆ ತೆರಳಿ, ರೈತರ ಮತ್ತು ಯೋಧರ ಹಿತ ಹಾಗೂ ನಾಡಿ ಜನತೆಯ ಸಮಸ್ಯೆಗಳು ಪರಿಹಾರವಾಗಲಿ, ಉತ್ತಮ ಮಳೆಯೊಂದಿಗೆ ಬೆಳೆಯು ರೈತರ ಮನೆ ಸೇರಲಿ, ಯಾವುದೇ ನೀರಿನ ಸಮಸ್ಯೆಗಳು ಬಾರದಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಹೊಳಲು ನಾಗರಾಜು, ಶಂಕರ್, ರಾಜು, ಸೋಮ, ಯೋಗೇಶ್, ಚೆನ್ನೇಗೌಡ, ಅನುರಾಧ, ಜ್ಯೋತಿ, ಜವರಯ್ಯ, ನಾಗರಾಜು ಇತರರರು ಹಾಜರಿದ್ದರು.