ಮಂಡ್ಯ ಜಿಲ್ಲೆ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಹೆಣ್ಣುಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಜಿಲ್ಲಾಡಳಿತವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆರೋಪಿಸಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತಸಂಘದ ಹೋರಾಟಗಾರ್ತಿ ಸುನಂದ ಜಯರಾಂ ಅವರು, ಇತ್ತೀಚಿನ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 1000 ಗಂಡು ಮಕ್ಕಳಿಗೆ ಕೇವಲ 846 ಹೆಣ್ಣು ಮಕ್ಕಳಿದ್ದಾರೆ. ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಅಲೆಮನೆಯಲ್ಲಿ ಭ್ರೂಣ ಲಿಂಗಪತ್ತೆ ಮಾಡಿ ಹತ್ಯೆ ಮಾಡುವ ಜಾಲವನ್ನು ಬೆಂಗಳೂರು ಪೋಲೀಸರು ಭೇದಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸಂಘಟನೆಗಳು ಕಳೆದ ನ.26 ರಂದೇ ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ನೀಡಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರೂ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ದೂರಿದರು.
ಬೆಂಗಳೂರು ಪೋಲಿಸರು 6 ಜನರನ್ನು ಬಂಧಿಸಿದ ನಂತರ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಹಾಗೂ ಸಂಘಟನೆಗಳು ಪ್ರತಿರೋಧ ಹೆಚ್ಚಾದ ಮೇಲೆ ಮತ್ತು ಮೇಲಾಧಿಕಾರಿಗಳ ಆದೇಶದ ನಂತರ ದಂಧೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಷ್ಟರಲ್ಲಿ ಅವರ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಮತ್ತು ಇಲ್ಲಿಯವರೆಗೆ ಅಲೆಮನೆ ಮಾಲೀಕರ ಮೇಲೆ ಪ್ರಕರಣ ದಾಖಲು ಕೂಡ ಮಾಡಿಲ್ಲ. ಅಲೆಮನೆ ಸಿಜ್ ಕೂಡ ಮಾಡಿಲ್ಲಾ. ಇದನ್ನೆಲ್ಲಾ ನೋಡಿದರೇ ಮೇಲ್ನೋಟಕ್ಕೆ ಪ್ರಕರಣ ಮುಚ್ಚಿ ಹಾಕುವ ತಿರ್ಮಾನಕ್ಕೆ ಬಂದತ್ತಿದೆ ಎಂದು ಆರೋಪಿಸಿದರು.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿಯುತ್ತಿದೆ. 18 ವರ್ಷ ತುಂಬುವ ಮೊದಲೆ ಗರ್ಭಿಣಿಯಾಗುವ ಪ್ರಕರಣ ಹೆಚ್ಚಾಗಿವೆ. ಬಾಲ್ಯವಿವಾಹ ಹೆಚ್ಚಾಗಿ ನಡೆಯುತ್ತಿದೆ. ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಂತಹ ಘಟನೆ ಹಾಗೂ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಕ್ಕೊತ್ತಾಯಗಳು
- ಹೆಣ್ಣು ಭ್ರೂಣ ಹತ್ಯೆ ಜಾಲ ಬರೀ ನಮ್ಮ ಜಿಲ್ಲೆಗೆ ಮಾತ್ರ ಸಿಮೀತವಾಗದೇ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಇತರೇ ರಾಜ್ಯ ಗಳಲ್ಲಿ ವಿಸ್ತರಿಸುವ ಅನುಮಾನವಿದೆ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
- ಜಿಲ್ಲೆಯಲ್ಲಿ ಪದೇ ಪದೇ PC & PNDT ಕಾಯ್ದೆಯನ್ನು ಉಲ್ಲಂಘನೆ ಮಾಡುವ ವೈದ್ಯರ ಮತ್ತು ಸೆಂಟರ್ಗಳ ಲೈಸನ್ಸ್ ಶಾಶ್ವತವಾಗಿ ರದ್ದು ಪಡಿಸಬೇಕು.
- ಜಿಲ್ಲಾ PC&PNDT ಖಾತೆಯಲ್ಲಿ ಸಾಕಷ್ಟು ಹಣವಿದ್ದರು ಇಲ್ಲಿಯವರ ಸಮುದಾಯಕ್ಕೆ ಮತ್ತು ವೈದ್ಯರಿಗೆ ಹೆಣ್ಣು ಮಕ್ಕಳ ಮೌಲ್ಯ ಮತ್ತು ಮಹತ್ವ ಸಾರುವ ಹಾಗೂ ಕಾನೂನು ಸಮರ್ಪಕ ಅನುಷ್ಠಾನದ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮಗಳು ಆಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಿರುವುದಿಲ್ಲಾ ಇನ್ನು ಮುಂದೆಯಾದರು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ PC&PNDT ಕಾಯ್ದೆ ಪ್ರಕಾರ ಶಿಕ್ಷೆ ಮತ್ತು ಹೆಣ್ಣು ಮಕ್ಕಳ ಮೌಲ್ಯ ಮತ್ತು ಮಹತ್ವ ಕುರಿತ ಜಾಗೃತಿ ಮೂಡಿಸುವ ಫಲಕಗಳನ್ನು ಆಳವಡಿಸಬೇಕು.
- ಸರ್ಕಾರ ಇಡಿ ಪ್ರಕರಣವನ್ನು ಸಿ,ಐ,ಡಿ ತನಿಖೆಗೆ ವಹಿಸಿರುವುದನ್ನು ಹಾಗೂ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಸ್ವಾಗತಿಸುತ್ತ ಹಾಡ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ PC&PNDT ಕಾಯ್ದೆಯಡಿ ಶಿಕ್ಷೆಯಾಗಬೇಕು.
- ಹಾಡ್ಯ ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ ಕಂಡುಬಂದಿರುವ ಕಾರಣ ಸಂಬಂಧ ಪಟ್ಟ ಅಧಿಕಾರಿಳನ್ನು ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- PC & PNDT ಕಾಯ್ದೆಯಡಿಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ತೀವ್ರಗೊಳಿಸಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು.
- ಜಿಲ್ಲಾ ಮಟ್ಟದಲ್ಲಿ ಇರುವ ಮೂರು ಹಂತದ ಸಮಿತಿಯ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಆಗಿದ್ದಾ೦ಗೇ ಸ್ಥಾನಿಂಗ್ ಸೆಂಟರ್ಗಳಿಗೆ ಅನೀರಿಕ್ಷಿತವಾಗಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿ ನ್ಯೂನ್ಯತೆಗಳು ಕಂಡುಬಂದರೆ S 29(1) ರ ಅಡಿ ದೂರು ದಾಖಲಿಸಬೇಕು.
- 900 ಕ್ಕಿಂತ ಹೆಚ್ಚು ಭ್ರೂಣ ಹತ್ಯೆಯಲ್ಲಿ ಬಾಗಿಯಾಗಿರುವ ಕುಟುಂಬದವರು ಮತ್ತು ಸಂಬಂಧಿಕರು ಹಾಗೂ ಏಜೆಂಟ್ ಗಳನ್ನು ಪತ್ತೆ ಹಚ್ಚಿ ಅವರ ಮೇಲೂ ಕೂಡ ಕಾನೂನು ಕ್ರಮ ಕೈಗೊಳ್ಳಬೇಕು.
- ಜಿಲ್ಲಾ ಮಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಯ ಹಾಗೂ ಪ್ರಗತಿ ಪರ ಸಂಘಟನೆಗಳ ಮುಖಂಡರ ಸಭೆ ಕರೆದು ಸಲಹೆ ಮತ್ತು ಅಭಿಪ್ರಾಯ ಪಡೆಯಬೇಕು
- ವಿಳಂಬ ನೊಂದಣಿ ಮಾಡಿಸುವ ಗರ್ಭಿಣಿಯರು ಮೇಲೆ ನಿಗಾ ಇಟ್ಟು ಅವರಿಗೆ ಅರಿವು ಮೂಡಿಸಬೇಕು.
- ಜಿಲ್ಲಾ ಮಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ಕುರಿತು ದೂರು ನೀಡಲು ಜಿಲ್ಲಾ ಸಹಾಯವಾಣಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಮಾಜಿ ಶಾಸಕಿ ಮಲ್ಲಾಜಮ್ಮ, ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ನಗರಸಭಾ ಮಾಜಿ ಆಧ್ಯಕ್ಷ ವಿಜಯಲಕ್ಷ್ಮಿ ರಘುನಂದ್, ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿಐಟಿಯು ಸಿ.ಕುಮಾರಿ, ವಿಮೋಚನ ಸಂಸ್ಥೆಯ ಜನಾರ್ಧನ್ ಉಪಸ್ಥಿತರಿದ್ದರು.