ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ಕೈಗೊಳ್ಳಲಿದೆ ಎಂದು ಶಾಸಕ ತನ್ವೀರ್ ಶೇಠ್ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಇ ಅಕ್ರಮ ರೂವಾರಿ ಆರ್.ಡಿ. ಪಾಟೀಲ್ ಪರಾರಿಯಾಗಿದ್ದು, ಹಗರಣಗಳ ಮರುತನಿಖೆಗೆ ಸರ್ಕಾರ ತೀರ್ಮಾನಿಸಿದೆ. ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸಾಕಷ್ಟು ಯುವಕರ ಭವಿಷ್ಯವನ್ನು ಕತ್ತಲೆಗೆ ದೂಡಲಾಗಿದೆ, ಇಂತಹ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡಬಾರದು. ತಕ್ಷಣ ಆರೋಪಿಯನ್ನು ಬಂಧಿಸಿ, ಸರಿಯಾದ ವಿಚಾರಣೆ ಮಾಡಬೇಕು ಎಂದರು.
ಪರೀಕ್ಷೆ ಬರೆದ ಅನೇಕರ ವಯೋಮಿತಿ ಮೀರುವ ಸಾಧ್ಯತೆ ಇದೆ, ಅಂತಹವರಿಗೆ ಒಂದು ಬಾರಿ ರಿಯಾಯಿತಿ ಕೊಟ್ಟು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದರು.
ಜಾತಿಗಣತಿ ಬಹಿರಂಗಗೊಳಿಸಿ
2011ರ ನಂತರ ಜಾತಿಗಣತಿ ಆಗಿಲ್ಲ. ಪ್ರತಿ ಹತ್ತು ವರ್ಷಕ್ಕೆ ಆರ್ಥಿಕ ಸ್ಥಿತಿಗತಿ ಸಮೀಕ್ಷೆ ಆಗಬೇಕು. ಕೇಂದ್ರ ಸರ್ಕಾರದಿಂದ ಜಾತಿಗಣತಿಗೆ ರಾಜ್ಯ ಸರ್ಕಾರಗಳಿಗೆ ಅನುದಾನ ಬಂದಿದೆ. ಈಗಾಗಲೇ ಜಾತಿಗಣತಿ ಆಗಿದೆ ಅದನ್ನು ಬಹಿರಂಗ ಪಡಿಸಬೇಕು. ಜಾತಿಯ ವ್ಯವಸ್ಥೆಯಲ್ಲಿ ಯಾರ್ಯಾರು ಎಷ್ಟೆಷ್ಟು ಇದಾರೆ ನೋಡಬೇಕು.
ಜಾತಿಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು. ಭಿಕ್ಷೆ ಬೇಡಿ ಎಲ್ಲಾ ಸಂದರ್ಭದಲ್ಲೂ ಹೋಗಲು ಆಗಲ್ಲ.
ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕೊಟ್ಟು ಬಿಟ್ರೆ ಇನ್ನೇನು ಕೇಳಲ್ಲ ಎಂದರು.
ಜಾತಿ ಆಧಾರಿತ ಮುಖ್ಯಮಂತ್ರಿ, ಮಂತ್ರಿ ಅನ್ನೋದಲ್ಲ. ಜಾತಿಗಣತಿ ಆಗಿ 7 ವರ್ಷ ಆಗಿದೆ. ಹೊರಗೆ ಬರುವ ಮುಂಚೆ ಹುಲಿ ಬಂತು ಹುಲಿ ಅನ್ನೋದಲ್ಲ. ಜಾತಿಗಣತಿ ಬಂದಾದ ಮೇಲೆ ಅದರ ಬಗ್ಗೆ ಚರ್ಚೆ ಆಗಬೇಕು ಎಂದರು.
ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕಾಗಿ ನಾನು ಯಾರನ್ನು ಕಾಡಿ ಬೇಡಿ ಸ್ಥಾನಮಾನ ಪಡೆಯಲ್ಲ. ಈಗ ಯಾವುದೇ ಸ್ಥಾನ ಖಾಲಿ ಇಲ್ಲ. ಅವಕಾಶ ಸಿಕ್ಕಾಗ ಕೆಲಸ ಮಾಡ್ತೀನಿ. ಪಕ್ಷ ಅಧಿಕಾರಕ್ಕೆ ಬಂದಿದೆ, ಚುನಾವಣೆ ವೇಳೆ ಕೊಟ್ಟ ಆಶ್ವಾಸನೆ ಈಡೇರಿಸುವ ಕೆಲಸ ಮಾಡ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.