ಗಾಝಾದಲ್ಲಿ 11,000ಕ್ಕೂ ಹೆಚ್ಚು ಜನರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಂಡಿಸಿದ್ದು, ಈ ಸ್ಥಿತಿ ಶೋಚನೀಯವಾಗಿದೆ. ನರಮೇಧವನ್ನು ಬೆಂಬಲಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಈ ನರಮೇಧವನ್ನು ಬೆಂಬಲಿಸುವವರ ಆತ್ಮಸಾಕ್ಷಿಗೆ ಇನ್ನೂ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರಿಯಾಂಕ ಗಾಂಧಿ ಇದೇ ವೇಳೆ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಿಯಾಂಕ ಗಾಂಧಿ, ಎಂತಹ ಶೋಚನಿಯ ಮತ್ತು ಅವಮಾನಕಾರಿ ಬೆಳವಣಿಗೆ, ಗಾಝಾದಲ್ಲಿ 10,000ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಅದರಲ್ಲಿ ಅರ್ಧದಷ್ಟು ಮಕ್ಕಳಿದ್ದಾರೆ. WHO ಪ್ರಕಾರ ಪ್ರತಿ 10 ನಿಮಿಷಕ್ಕೆ ಒಂದು ಮಗು ಕೊಲ್ಲಲ್ಪಡುತ್ತಿದೆ ಮತ್ತು ಈಗ ಸಣ್ಣ ಶಿಶುಗಳನ್ನು ಆಮ್ಲಜನಕದ ಕೊರತೆಯಿಂದಾಗಿ ಸಾಯಲು ಬಿಡಲಾಗಿದೆ ಎಂದು ಹೇಳಿದ್ದಾರೆ.
ಈ ನರಮೇಧವನ್ನು ಬೆಂಬಲಿಸುವವರ ಆತ್ಮಸಾಕ್ಷಿಗೆ ಯಾವುದೇ ಆಘಾತವಾಗಿಲ್ಲ, ಕದನ ವಿರಾಮವಿಲ್ಲ, ಕೇವಲ ಬಾಂಬ್ಗಳನ್ನು ಹಾಕಲಾಗುತ್ತಿದೆ, ಹಿಂಸಾಚಾರ ಹೆಚ್ಚಾಗಿದೆ, ಹೆಚ್ಚು ಹತ್ಯೆಗಳು ನಡೆಯುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಗಾಯಗಳಾಗುತ್ತಿದೆ. ಈ ವಿನಾಶವನ್ನು ಬೆಂಬಲಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಯಾಗಬೇಕು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿ ನಡೆಸಿದ ನಂತರ ಇಸ್ರೇಲ್ ಯುದ್ಧ ಘೋಷಿಸಿದೆ. ಯುದ್ಧ 1 ತಿಂಗಳು ಕಳೆದಿದ್ದು, ಗಾಝಾ ಪಟ್ಟಿ ಮೇಲಿನ ಇಸ್ರೇಲ್ ಬಾಂಬ್ ದಾಳಿ ಮುಂದುವರಿದಿದೆ.
ಇಸ್ರೇಲ್ ಅಧಿಕಾರಿಗಳ ಪ್ರಕಾರ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,200 ಜನರು ಮೃತಪಟ್ಟಿದ್ದಾರೆ. 240 ಜನರನ್ನು ಒತ್ತೆಯಾಳುಗಳಾಗಿ ಇಡಲಾಗಿದೆ.