ಮಾಜಿ ಶಾಸಕ ಸುರೇಶ್ ಗೌಡ ಚುನಾವಣಾ ಸೋಲಿನ ಹತಾಶೆಯಿಂದ ಮನಬಂದಂತೆ ಮಾತನಾಡುತ್ತಿರುವುದು ಅವರ ಘನತೆಗೆ ತಕ್ಕುದ್ದಲ್ಲ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಹೇಳಿದರು.
ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಪ್ರಜ್ಞಾವಂತ ಮತದಾರರು ಮಾಜಿ ಶಾಸಕ ಸುರೇಶ್ ಗೌಡರ ವೈಫಲ್ಯತೆಗಳ ಕಾರಣದಿಂದ ಸೋಲಿಸಿದ್ದಾರೆ ಎಂದರು.
ನಾಗಮಂಗಲದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆ, ಕಾಮಗಾರಿಗಳಲ್ಲಿ ದಂಧೆ ನಡೆದಿರುವುದು ಸಾರ್ವಜನಿಕರ ಮನೆ ಮಾತಾಗಿತ್ತು, ಇದಕ್ಕೆ ಕಾರಣರಾಗಿದ್ದ ಸುರೇಶ್ ಗೌಡ ಅವರು, ನಮ್ಮ ನಾಯಕ ಸಚಿವ ಚಲುವರಾಯಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಹಾಸ್ಯಾಸ್ಪದವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಪುರಸ್ಕರಿಸುವ ಹಾಗೂ ತಿರಸ್ಕರಿಸುವ ಹಕ್ಕುಗಳು ಅವರಿಗಿದೆ, ಅಂತಹ ಪ್ರಬುದ್ಧತೆಯಿಂದಲೇ ಸುರೇಶ್ ಗೌಡರಿಗೆ ತಕ್ಕ ಪಾಠ ಕಲಿಸಿದ್ದಾರೆಂದು ಕಿಡಿಕಾರಿದರು.
ಸುರೇಶ್ ಗೌಡ ತಾವು ಪರಿಪೂರ್ಣ ಪರಿಶುದ್ಧತೆಯಿಂದ ಇದ್ದಾಗ ಮಾತ್ರ, ಬೇರೆಯವರ ಬಗ್ಗೆ ಮಾತನಾಡುವ ಧೈರ್ಯ ಮಾಡಬೇಕು. ವಿದ್ಯಾವಂತನೆಂದು ಹೇಳಿಕೊಳ್ಳುವ ಅವರು ಬಳಸುವ ಭಾಷೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ, ಸುಮ್ಮನೆ ನಮ್ಮ ನಾಯಕರ ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ಸೋಲಿಗೆ ಕಾರಣವೇನೆಂದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮರಾಯಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶರತ್, ನರಸಿಂಹ ಮೂರ್ತಿಮ ರವಿ ಉಪಸ್ಥಿತರಿದ್ದರು.