ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವ ಮೂಲಕ ಪರಿಸರ ಮಾಲಿನ್ಯ -ವಾಯುಮಾಲಿನ್ಯ -ಶಬ್ದ ಮಾಲಿನ್ಯ ಜೊತೆಗೆ ಅಕ್ಕ -ಪಕ್ಕದವರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಜಿ.ಈ. ಟಿ.ಕೋ -ಆರ್ಡಿನೆಟರ್ ಲ. ಹನುಮಂತಯ್ಯ ಅಭಿಪ್ರಾಯಪಟ್ಟರು.
ಇಂದು ದೀಪಾವಳಿ ಹಬ್ಬದ ಪ್ರಯುಕ್ತ, ಮಂಡ್ಯದ ಸರ್ಕಾರಿ ಪದವಿ -ಪೂರ್ವ ಕಾಲೇಜು (ಮಾಜಿ -ಪುರಸಭೆ) ಆವರಣದಲ್ಲಿ, ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ “ಪಟಾಕಿ ಸುಡುವುದು ಬಿಡಿ -ಗಿಡ ನೆಡಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಟಾಕಿಗಳನ್ನು ಹಚ್ಚುವುದನ್ನು ಬಿಟ್ಟು, ಅಗತ್ಯವೆನಿಸಿದೆಡೆ, ಪರಿಸರ ಪೂರಕ ಗಿಡಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಲಯನ್ಸ್ ವಲಯಾಧ್ಯಕ್ಷ ಲ.ಜಿ. ಧನಂಜಯ ದರಸಗುಪ್ಪೆ ಮಾತನಾಡಿ, ಪಟಾಕಿಯನ್ನು ಸುಡುವುದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪೋಷಕರು ಮಕ್ಕಳಿಗೆ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿರಂತರವಾಗಿ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಪ್ರತಿವರ್ಷ ಪತ್ರಿಕೆ ಹಾಗೂ ವಿದ್ಯುನ್ಮಾದ್ಯಮಗಳಲ್ಲಿ ಪಟಾಕಿಯಿಂದಾಗುವ ಹಾಗೂ ಪ್ರಸ್ತುತ ಆಗುತ್ತಿರುವ ಅನಾಹುತಗಳ ಬಗ್ಗೆ ವರದಿ ಪ್ರಕಟಿಸುತ್ತಲೇ ಇವೆ. ಆದರೂ ಕೂಡ ಪೋಷಕರು ಮಕ್ಕಳಿಗೆ ಪಟಾಕಿ ಕೊಡಿಸುತ್ತಿರುವುದು ವಿಪರ್ಯಾಸವಾಗಿದೆ,ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪೋಷಕರ ಪಾತ್ರ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲ. ಕೆ.ಶಿವಲಿಂಗಯ್ಯ ಕಾರ್ಯದರ್ಶಿ ಲಯನ್. ಶಿವಲಿಂಗೇಗೌಡ, ಹಾಗೂಉಪನ್ಯಾಸಕ ಬಾಲಕೃಷ್ಣೆಗೌಡ, ಪ್ರಚಾರ್ಯ ಆನಂದ್, ಶಾಖಾಧಿಕಾರಿ ರಾಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.