ಕೇಂದ್ರದಲ್ಲಿ ತಮ್ಮ ಸರ್ಕಾರ ರಚನೆಯಾದಾಗ ಮೊದಲ ಸಹಿ ಜಾತಿ ಗಣತಿಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಸ್ವಾತಂತ್ರ್ಯಾನಂತರ ಇದು (ಜಾತಿ ಗಣತಿ) ಅತ್ಯಂತ ಕ್ರಾಂತಿಕಾರಕ ನಿರ್ಧಾರವಾಗಲಿದೆ ಎಂದು ಅವರು ಹೇಳಿದರು.
ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ”ಒಬಿಸಿಗಳಿಗೆ ಹಕ್ಕು ನೀಡುವ ವಿಷಯಕ್ಕೆ ಬಂದಾಗ, ಅವರು ಒಬಿಸಿಗಳಿಲ್ಲ ಎಂದು ಹೇಳುತ್ತಾರೆ. ಭಾರತದಲ್ಲಿ ಒಂದೇ ಜಾತಿಯವರು ಎಷ್ಟು ಜನರಿದ್ದಾರೆ? ಬಡವರು, ಒಬಿಸಿಗಳು ಎಷ್ಟು ಮಂದಿ ಇದ್ದಾರೆ ಅನ್ನೋದನ್ನು ಪತ್ತೆ ಮಾಡುತ್ತೇವೆ. ಅವರು ಶೇ.10, 20, ಅಥವಾ ಶೇ.60 ಆಗಿರಲಿ ಜನಸಂಖ್ಯೆಯಷ್ಟೇ ಭಾಗವಹಿಸುವಿಕೆ ನಿಮಗೆ ಸಿಗುತ್ತದೆ” ಎಂದು ರಾಹುಲ್ ಹೇಳಿದರು.
”ನರೇಂದ್ರ ಮೋದಿ ಜಾತಿ ಗಣತಿ ಮಾಡಲಿ ಬಿಡಲಿ ಛತ್ತೀಸ್ಗಢದಲ್ಲಿ ನಮ್ಮ ಸರ್ಕಾರ ರಚನೆಯಾದರೆ ಜಾತಿ ಸಮೀಕ್ಷೆ ದೆಹಲಿಯಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಮೊದಲ ಸಹಿ ಜಾತಿ ಗಣತಿಗೆ ಆಗುತ್ತದೆ” ಎಂದು ಅವರು ಭರವಸೆ ನೀಡಿದರು.
”ಈ ದೇಶದ ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರು ತಮ್ಮ ನಿಜವಾದ ಜನಸಂಖ್ಯೆ ಮತ್ತು ಅವರ ನಿಜವಾದ ಶಕ್ತಿಯನ್ನು ಕಂಡುಕೊಂಡ ದಿನ, ಈ ದೇಶವು ಶಾಶ್ವತವಾಗಿ ಬದಲಾಗುತ್ತದೆ. ಸ್ವಾತಂತ್ರ್ಯದ ನಂತರ, (ಜಾತಿ ಜನಗಣತಿ ನಡೆಸುವುದು) ಇದು ಅತ್ಯಂತ ಕ್ರಾಂತಿಕಾರಿ ನಿರ್ಧಾರವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
”ರಾಜ್ಯ ಸರಕಾರದಿಂದ ಪ್ರತಿ ವರ್ಷ ರಾಜ್ಯದ ಎಲ್ಲ ಮಹಿಳೆಯರ ಖಾತೆಗಳಿಗೆ 15 ಸಾವಿರ ರೂ.ಗಳನ್ನು ಜಮಾ ಮಾಡಲಾಗುವುದು” ಎಂದು ರಾಹುಲ್ ಗಾಂಧಿ ಹೇಳಿದರು.
”ಛತ್ತೀಸ್ಗಢ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ: ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು” ಎಂದು ಅವರು ಹೇಳಿದರು.
ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ನಿಗದಿಯಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 7 ರಂದು ಮುಕ್ತಾಯಗೊಂಡಿದೆ. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ.
ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ 90 ಸ್ಥಾನಗಳಲ್ಲಿ 68 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ 15 ಸ್ಥಾನ ಗಳಿಸಿತ್ತು.
ರಾಜಸ್ಥಾನದಲ್ಲಿ ಕಾಂಗ್ರೆಸ್ 200 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದು ಬಹುಜನ ಸಮಾಜ ಪಕ್ಷ (BSP) ಮತ್ತು ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ಬಿಜೆಪಿ 73 ಸ್ಥಾನ ಗಳಿಸಿದೆ.