ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರವನ್ನು ಮುಂದಿಟ್ಟುಕೊಂಡು ಮಾತ್ರ ಪಾದಯಾತ್ರೆ ಮಾಡಿದೆ.ಆದರೆ ಜೆಡಿಎಸ್ ಪಕ್ಷ ದೇವೇಗೌಡರ ನೇತೃತ್ವದಲ್ಲಿ ಕಾವೇರಿ, ಕೃಷ್ಣ,ಮಹದಾಯಿ ಸೇರಿದಂತೆ ರಾಜ್ಯದ ಎಲ್ಲಾ ನದಿಗಳ ವಿಚಾರದಲ್ಲಿ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಗುಡುಗಿದರು.
ಶ್ರೀರಂಗಪಟ್ಟಣದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮೇಕೆದಾಟು ಯೋಜನೆ ತನ್ನದು ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಳ್ಳುತ್ತದೆ.ಆದರೆ ಮೇಕೆದಾಟು ಅಣೆಕಟ್ಟಿನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಜೆಡಿಎಸ್ ಪಕ್ಷ ಮೊದಲಿನಿಂದಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ನದಿಗಳ ಪರ ಹೋರಾಟ ರೂಪಿಸಿಕೊಂಡು ಬಂದಿದೆ.ನೀರಾವರಿ ವಿಚಾರದಲ್ಲಿ ಜೆಡಿಎಸ್ ಹೋರಾಟ ಎಂದೆಂದಿಗೂ ನಿರಂತರವಾಗಿ ಇರುತ್ತದೆ ಎಂದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಅತಿಹೆಚ್ಚು ಅನುದಾನ ನೀಡಿದ ಹೆಗ್ಗಳಿಕೆ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ. ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡಿದಾಗ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ರಾಜ್ಯಕ್ಕೆ ಹೆಚ್ಚವರಿ ಪಾಲು ದೊರೆಯಿತು ಎಂದರು.
ರೈತರ ಪಕ್ಷ ಜೆಡಿಎಸ್
ರೈತರ ಪರ ಸದಾ ಯೋಚನೆ ಮಾಡುವ ಪಕ್ಷ ಒಂದಿದ್ದರೆ ಅದು ಜೆಡಿಎಸ್ ಮಾತ್ರ.ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು, ಅತಿವೃಷ್ಟಿ,ಅನಾವೃಷ್ಟಿಯಿಂದ ಬೆಳೆಗೆ ಹಾನಿಯಾಗಿರುವುದು ಇದರ ಬಗ್ಗೆ ಸಂಪೂರ್ಣ ಅರಿವಿದ್ದ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾ ಮಾಡುವ ಮೂಲಕ ರೈತನ ನೆರವಿಗೆ ನಿಂತರು.
ಇಂದಿರುವ ಸರ್ಕಾರ ಅನ್ನದಾತನ ನೆರವಿಗೆ ನಿಲ್ಲತ್ತಿಲ್ಲ.ತಮ್ಮ ಕೋಮುವಾದಿ ನಿಲುವಿನಿಂದ ಸತ್ತವರಿಗೆ ಅವರ ಪಕ್ಷದ ಸಚಿವರೇ ಮನೆಗೆ ಹೋಗಿ 25-30 ಲಕ್ಷ ಕೊಡುತ್ತಾರೆ.ಬೇರೆಯವರು ಸತ್ತರೆ ಅಧಿಕಾರಿಗಳ್ನು ಕಳಿಸಿ ಒಂದೋ,ಎರಡೋ ಲಕ್ಷ ಕೊಡುತ್ತಾರೆ.ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರಿಗೆ ಧಮ್ಮಿಲ್ಲ
ಹಲಾಲ್ ಕಟ್,ಹಿಜಾಬ್ ಅಂತೆಲ್ಲಾ ಕೆಲವು ಕೋಮುವಾದಿಗಳು ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಗಲಭೆ ಎಬ್ಬಿಸಿದ್ದಾರೆ.ಬಿಜೆಪಿ ಸರ್ಕಾರ ಅಧಿಕಾರಕ್ಕಾಗಿ ಕೋಮುವಾದಿಗಳ ಅಟ್ಟಹಾಸವನ್ನು ನೋಡಿಕೊಂಡು ಸುಮ್ಮನಿರುವಾಗ ಕುಮಾರಸ್ವಾಮಿ ಧೈರ್ಯದಿಂದ ನನಗೆ ಮತ ಮುಖ್ಯವಲ್ಲ.
ಈ ನಾಡಿನ ಶಾಂತಿ ಮುಖ್ಯ ಅಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಕಾಂಗ್ರೆಸ್ ನಾಯಕರು ವೋಟು ಹೋಗುತ್ತದೆ ಎಂದು ಸುಮ್ಮನೆ ಕುಳಿತರು. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೇ ಕುಮಾರಸ್ವಾಮಿ ಮಾತಿಗೆ ಭಯಗೊಂಡು ನಂತರ ಕೋಮುವಾದಿಗಳ ವಿರುದ್ಧ ಮಾತನಾಡಲು ಶುರು ಮಾಡಿದರು.ಕುಮಾರಸ್ವಾಮಿ ಅವರಿಗೆ ಅಧಿಕಾರಕ್ಕಿಂತ ನಾಡಿನ ಶಾಂತಿಯೇ ಮುಖ್ಯ ಎಂದರು.