ಮಂಡ್ಯನಗರ ಹೊರವಲಯದ ಹನಿಯಂಬಾಡಿ ರಸ್ತೆಯಲ್ಲಿರುವ ಕಾವೇರಿ ನಗರ ಬಡಾವಣೆಯಲ್ಲಿರುವ ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 2023ರ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕಲಾಸಿರಿ ಸಾಂಸ್ಕೃತಿಕ ಕಾರ್ಯಕ್ರಮದ ಚಿಣ್ಣರ ಹಬ್ಬ ಕಾರ್ಯಕ್ರಮವು ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೆಂಗಳೂರಿನ ಬಿ.ಎಂ.ಶ್ರೀಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ ಉದ್ಘಾಟಿಸಿ ಮಾತನಾಡಿ, ಜಾಗತೀಕರಣ ಹಾಗೂ ಮನುಷ್ಯನ ದುರಾಸೆಯ ಪ್ರಭಾವದಿಂದ ಕರ್ನಾಟಕದ ಶ್ರೀಮಂತ ಜಾನಪದ ಕಲೆಗಳು ಸಾಮರಸ್ಯದಿಂದ ಹೊರಗೆ ಬಂದಿರುವ ದುರಂತ ನೋಡುತ್ತಿದ್ದೇವೆ. ಗ್ರಾಮೀಣ ಸಂಸ್ಕೃತಿಯ ಜಾನಪದ ಕಲೆಗಳು ಒಂದು ಕಾಲದಲ್ಲಿ ಜಾತ್ರೆ ಇದೆ ಎಂದರೆ, ಹಬ್ಬ ಹರಿದಿನಗಳಲ್ಲಿ ಇಡೀ ಊರಿನ ಸಂಭ್ರಮ ಎದ್ದು ಕಾಣುತ್ತಿತ್ತು ಎಂದು ಹೇಳಿದರು.
ಮೂಡಲಪಾಯ ಯಕ್ಷಗಾನ ದಕ್ಷಿಣ ಕರ್ನಾಟಕದ ಹೆಮ್ಮೆಯ ಕಲೆ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿ ರುವುದನ್ನು ಕಂಡು ಕರ್ನಾಟಕ ಸಂಘ ಇಂತಹ ಕಲೆಯನ್ನ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಯಕ್ಷಗಾನ ಕಲೆಯನ್ನು ಪ್ರದರ್ಶಿಸುವ ಮೂಲಕ ಉಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಭಾಗವಹಿಸಿ ಮಾತನಾಡಿ, ಮಕ್ಕಳು ಅದ್ಭುತವಾದ ಕುತೂಹಲ ಬೆಳೆಸಿಕೊಂಡಿರುತ್ತಾರೆ. ಅವರಲ್ಲಿ ಕೌತುಕ, ಕುತೂಹಲ ಇರುತ್ತದೆ ಶಾಲೆಗಳಲ್ಲಿ ಈ ರೀತಿಯ ಜಾನಪದ ಪ್ರದರ್ಶನವನ್ನು ಏರ್ಪಡಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಕೃಷ್ಣಪ್ಪ, ಕಾರ್ಯದರ್ಶಿ ರತ್ನಶ್ರೀ, ಟ್ರಸ್ಟಿ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಫಣಿಮಾಲ.ಬಿ. ಸುನಿಲ್, ಮುಖ್ಯ ಶಿಕ್ಷಕಿಯರಾದ ಬಿ.ಎಸ್.ಗೀತಾ, ಬಿ.ಆರ್. ಶುಭ ಹಾಗೂ ಇನ್ನಿತರರಿದ್ದರು.