ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳಿಂದ ಅಣುಕು ಪ್ರದರ್ಶನ ಕಾರ್ಯಕ್ರಮ ಜರುಗಿತು.
ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಾಗ ಆಗುವ ದುರ್ಘಟನೆ ಹಾಗೂ ಅಪಾಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸಹಾಯಕ ಅಗ್ನಿಶಾಮಕ ಅಧಿಕಾರಿ ಕೆ ಸಿ ಪರಮೇಶ್ ಮಾಹಿತಿ ನೀಡಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಕೈಗೊಳ್ಳುವ ಕ್ರಮಗಳು ಹಾಗೂ ಇಲಾಖೆ ಬಳಸುವ ಉಪಕರಣಗಳ ಬಗ್ಗೆ ಮಾಹಿತಿ ನೀಡಿ, ಅಣುಕು ಪ್ರದರ್ಶನ ಮೂಲಕ ಆಸ್ಪತ್ರೆಯ ವೈದ್ಯರು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ, ನೆರೆದಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಅಡುಗೆ ಅನಿಲ ಗ್ಯಾಸ್ ವಿತರಿಕರಿಂದ ಸಿಲಿಂಡರ್ ಪಡೆಯುವಾಗ ಅದು ಸರಿ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಿ, ಸಿಲಿಂಡರ್ ಅವಧಿ ಪರಿಶೀಲಿಸಿ, ಸ್ಟೌವನ್ನು ನೆಲದ ಮೇಲೆ ಇಟ್ಟು ಅಡುಗೆ ಮಾಡಬಾರದು ಉತ್ತಮ ಗಾಳಿ ಬೆಳಕು ಇರುವ ಕಡೆ ಸಿಲಿಂಡರ್ ಬಳಸಬೇಕು, ಸುಲಭವಾಗಿ ಬೆಂಕಿ ಹತ್ತುವ ಸಾಮಗ್ರಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು ಎಂದು ಸಲಹೆ ನೀಡಿದರು.
ಈ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ ಮಾರುತಿ ಮಾತನಾಡಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಆಕಸ್ಮಿಕ ಸಂಭವಿಸಿದ ಕಡೆ ತಕ್ಷಣ ಧಾವಿಸಿ ತಮ್ಮ ಜೀವದ ಹಂಗು ತೊರೆದು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿ ಕೊಳ್ಳುತ್ತಿರುವದು ಶ್ಲಾಘನೀಯ ಎಂದರು.
ಅಗ್ನಿಶಾಮಕ ಸಿಬ್ಬಂದಿ ರಮೇಶ ಬಂಡಿಗೇರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ಆಸ್ಪತ್ರೆಯ ವೈದ್ಯರು,ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.