ಮದ್ದೂರು ಪಟ್ಟಣದ ಮಾದರಿಯಲ್ಲೇ ಭಾರತೀನಗರ ಗ್ರಾಮಪಂಚಾಯಿತಿಯನ್ನು ಅಭಿವೃದ್ದಿ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ಧೂರು ತಾಲ್ಲೂಕಿನ ಭಾರತೀನಗರ ಗ್ರಾ.ಪಂ ಆವರಣದಲ್ಲಿ ಆಯೋಜಿಸಿದ್ದ ಇ-ಸ್ವತ್ತು ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ತಾ.ಪಂ ಇಓ ಇವರ ನೇತೃತ್ವದಲ್ಲಿ ಇ-ಸ್ವತ್ತು ಅಭಿಯಾನವನ್ನು 15 ದಿನಗಳ ಹಿಂದೆ ಕದಲೂರು ಗ್ರಾಮ ಪಂಚಾಯಿತಿಯಲ್ಲಿ ಚಾಲನೆ ನೀಡಲಾಗಿತ್ತು. ಮದ್ದೂರು ಕ್ಷೇತ್ರದಲ್ಲಿ ಭಾರತೀನಗರ ಗ್ರಾಮ ಪಂಚಾಯಿತಿ ದೊಡ್ಡ ಪಂಚಾಯಿತಿಯಾಗಿದ್ದು ಮದ್ದೂರು ಪಟ್ಟಣಕ್ಕಿಂತಲೂ ಎತ್ತರವಾಗಿ ಬೆಳೆಯುತ್ತಿದೆ. ಇದನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ನನ್ನೊಂದಿಗೆ ಇಲ್ಲಿನ ಪಂಚಾಯಿತಿ ಸದಸ್ಯರು, ಸ್ಥಳೀಯ ಪ್ರತಿನಿಧಿಗಳು ಕೈಜೋಡಿಸಬೇಕೆಂದು ತಿಳಿಸಿದರು.
ಇ-ಸ್ವತ್ತು ಆಂದೋಲನ ಅಭಿಯಾನ ಕಾರ್ಯಕ್ರಮ ಈಗಾಗಲೇ ಮುಗಿಯಬೇಕಾಗಿತ್ತು. ಬೆಳಗಾವಿಯ ಅಧಿವೇಶನ ಇದ್ದ ಕಾರಣ ತಡವಾಗಿದೆ. ನಾನೇ ಈ ಪಂಚಾಯಿತಿಗೆ ಖುದ್ದಾಗಿ ಬಂದು ಚಾಲನೆ ನೀಡಬೇಕೆಂಬ ಉದ್ದೇಶ ನನ್ನದ್ದಾಗಿತ್ತು ಎಂದರು.
ಇಲ್ಲಿನ ಎಲ್ಲಾ ಸರ್ಕಾರಿ ಕಛೇರಿಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಿ ಆಸ್ತಿಯನ್ನು ಇ-ಸ್ವತ್ತು ಮಾಡಿ ಭದ್ರತೆ ಒದಗಿಸಲಾಗಿದೆ. ಜೊತೆಗೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ತೊಡಕು ಆಗದಂತೆ ಸಾರ್ವಜನಿಕರ ಆಸ್ತಿಗಳನ್ನು ಇ-ಸ್ವತ್ತು ಮಾಡಿಸಲಾಗುತ್ತಿದೆ. ಸರ್ಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ಹಾಗಾಗಿ ಗ್ರಾ.ಪಂನಲ್ಲಿರುವಂತಹ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಎಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರ ಮತ್ತು ಸರ್ಕಾರಿ ಕಛೇರಿಗಳ ನೌಕರರಿಗೆ ಇ-ಸ್ವತ್ತು ವಿತರಣೆ ಮಾಡಲಾಯಿತು.
ಗ್ರಾ.ಪಂ ಅಧ್ಯಕ್ಷೆ ಎಂ.ಕೌಶಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇನ್ಸ್ಪೆಕ್ಟರ್ ಆನಂದ್, ಭಾರತೀನಗರ ಬ್ಲಾಕ್ ಕ್ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಉಪಾಧ್ಯಕ್ಷೆ ಸಿ.ಸುವರ್ಣ, ಮಾಜಿ ಅಧ್ಯಕ್ಷರಾದ ಎಂ.ಪಿ.ರವಿಚಂದ್ರ, ವೆಂಕಟೇಶ್, ಸೌಮ್ಯ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ರಾಘವೇಂದ್ರ, ಕೆ.ವಿ.ಶ್ರೀನಿವಾಸ್, ಸಿದ್ದರಾಜು, ಸೌಭಾಗ್ಯಮ್ಮ, ಮಾಲಾ, ಅನಿತ, ಸವಿತ ಸೇರಿದಂತೆ ಹಲವರಿದ್ದರು.
ಕಾಂಗ್ರೆಸ್ ಕಚೇರಿ, ಪಂಚಾಯಿತಿಗೆ ಭೇಟಿ
ಕಾರ್ಯಕ್ರಮದ ನಂತರ ಗ್ರಾ ಮಪಂಚಾಯಿತಿ ಕಛೇರಿಗೆ ಭೇಟಿನೀಡಿ ಪರಿಶೀಲನೆ ನಡೆಸಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದರ ಬಗ್ಗೆ ಪಿಡಿಓ ಎನ್.ಸುಧಾ ಅವರಿಗೆ ಶ್ಲಾಘಿಸಿ ನಂತರ ಪಂಚಾಯಿತಿ ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ನಂತರ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾ.ಪಂ ಅಧ್ಯಕ್ಷ ಕದಲೂರು ತಿಮ್ಮೇಗೌಡ, ಜಿ.ಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಟ್ಟನಹಳ್ಳಿ ಮಹೇಂದ್ರ, ಮೆಣಸಗೆರೆ ಮಧು, ಪೂಜಾರಿ ಮಹೇಶ್ , ಕಾಡುಕೊತ್ತನಹಳ್ಳಿ ಮಹದೇವು ಸೇರಿದಂತೆ ಹಲವರಿದ್ದರು.