ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಮಂಡ್ಯ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ, ದೀಪೋತ್ಸವಗಳು ನಡೆದವು.
ಮಂಡ್ಯನಗರ ಗುತ್ತಲು ಬಡಾವಣೆಯ ಅರಕೇಶ್ವರ, ಶಂಕರನಗರದ ಮಲೇ ಮಹದೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ನೆರವೇರಿದವು, ಕೆರಗೋಡು ಗ್ರಾಮದ ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ಸ್ವಾಮಿಯ ದೇವಾಲಯದಲ್ಲಿ 21 ನೇ ವರ್ಷದ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ಕಾರ್ಯಕ್ರಮವು ಜರುಗಿತು.
ಹೊಳಲು ದೇವಾಲಯದಲ್ಲಿ ಪೂಜೆ
ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ತಾಂಡವೇಶ್ವರ ಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನದಲ್ಲಿ ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಬೆಳಿಗ್ಗೆ 6 ರಿಂದ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರಿತು.
ಹಾಲಾಭಿಷೇಕ, ರುದ್ರಾಭಿಷೇಕ, ಎಳನೀರು ಅಭಿಷೇಕ, ಮೊಸರು ಅಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಿ ದೇವರಿಗೆ ವಿವಿಧ ಬಗೆಯ ಹೂವುಗಳ ಅಲಂಕಾರ ಮಾಡಿ ವಿಶೇಷವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ರಾಜ್ಯದಲ್ಲೇ ವಿಶೇಷವಾಗಿ ತಾಂಡವೇಶ್ವರ ಸ್ವಾಮಿಯನ್ನು ನೋಡಲು ಬೆಂಗಳೂರು, ತುಮಕೂರು, ಹಾಸನ, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ರಾಮನಗರ, ಚನ್ನಪಟ್ಟಣ, ಮಂಡ್ಯ, ಹೊಳಲು ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ವಿವಿಧ ಜಿಲ್ಲಾ ಹಾಗೂ ಗ್ರಾಮಗಳಿಂದಲೂ ಆಗಮಿಸಿ ಮುಡಿ ಕಾರ್ಯ ನೆರವೇರಿಸಿ, ವಿಶೇಷ ಪೂಜಾ ಕಾರ್ಯಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ಮುಜರಾಯಿ ಇಲಾಖೆಯ ಗುಣಶೇಖರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಮಂಜುನಾಥ್ ದೀಕ್ಷಿತ್, ಪ್ರದೀಪ್ ದೀಕ್ಷಿತ್ ಹಾಗೂ ಶ್ರೀ ತಾಂಡವೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್.ಮೋಹನ್ಕುಮಾರ್, ಕಾರ್ಯದರ್ಶಿ ಜಿ.ಬಿ.ಕೃಷ್ಣ, ಗ್ರಾಮದ ಮುಖಂಡರಾದ ಎಚ್.ಬಿ.ಶಿವಣ್ಣ, ಎಚ್.ಎಲ್.ಶಂಕರ್, ಸಚ್ಚಿದಾನಂದ, ಪುಟ್ಟಸ್ವಾಮಿ, ಹೊಳಲು ಹಾಗೂ ತಂಡಸನಹಳ್ಳಿ ಗ್ರಾಮಗಳ ಹಿರಿಯ-ಕಿರಿಯ ಮುಖಂಡರು ಭಾಗವಹಿಸಿದ್ದರು.