ಸರ್ಕಾರಿ ಇಲಾಖೆಗಳ ಅನುಮತಿ ಪಡೆಯದೆ ಆಲೆಮನೆ ನಡೆಸುತ್ತಿರುವ ಮಾಲೀಕರು ಪರಿಸರ ನೈರ್ಮಲ್ಯಕ್ಕೆ ಧಕ್ಕೆ ಉಂಟುಮಾಡಿ ನೆರೆ ಹೊರೆಯ ನಿವಾಸಿಗಳಿಗೆ ತೊಂದೆ ನೀಡುತ್ತಿದ್ದು, ಇದನ್ನು ಕಂಡೂ ಕಾಣದಂತಿರುವ ಗ್ರಾಮಪಂಚಾಯಿತಿ ಪಿಡಿಓ ಹಾಗೂ ಆಲೆಮನೆ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ತಿಮ್ಮನಕೊಪ್ಪಲು ಗ್ರಾಮದ ನಿವಾಸಿಗಳಾದ ಬಿ.ಸಿ.ನಿಂಗೇಗೌಡ ಮತ್ತು ಬಿ. ನಿಂಗೇಗೌಡ ಒತ್ತಾಯಿಸಿದರು.
ಮಂಡ್ಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಂಡವಪುರ ತಾಲೂಕಿನ ಕಸಬಾ ಹೋಬಳಿಯ ತಿಮ್ಮನಕೊಪ್ಪಲು ಮತ್ತು ದೊಡ್ಡಬ್ಯಾಡರಹಳ್ಳಿ ಗ್ರಾಮದ ಗಡಿ ಮಧ್ಯೆ ದೊಡ್ಡ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಲಲಿತಾ ಕೋಂ ನಿಂಗಣ್ಣ ಮತ್ತು ಕಾಳೇಗೌಡ ಬಿನ್ ಕರೀಗೌಡ ಎಂಬುವವರು ಪಂಚಾಯಿತಿ ಖಾತೆ ಸಂಖ್ಯೆ 319ರ ಜಂಜರು ಖಾತೆ ನಂ 75, ಅಸೆಸ್ಮೆಂಟ್ ನಂ. 70ರಲ್ಲಿ ಹಿಟ್ಟಿನ ಗಿರಣಿ ಎಂದು ಪರವಾನಗಿ ಪಡೆದು, ಅಕ್ರಮವಾಗಿ ಆಲೆಮನೆ ನಡೆಸುತ್ತಿದ್ದು, ಪರಿಸರಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ದೂರಿದರು.
ಆಲೆಮನೆಯಲ್ಲಿ ತ್ಯಾಜ್ಯ ವಸ್ತುಗಳಾದ ಕಬ್ಬಿನ ಸಿಪ್ಪೆ, ಕೊಳಚೆ ಸಿಪ್ಪೆ, ಪ್ಲಾಸ್ಟಿಕ್, ಟೈರ್ ಸೇರಿದಂತೆ ಇತರೆ ಕೊಳತ ವಸ್ತುಗಳ ಬಳಕೆಯಿಂದಾಗಿ ಪರಿಸರ ಕಲುಷಿತವಾಗಿದ್ದು, ಇದರಿಂದ ನೆರೆಹೊರೆಯ ನಿವಾಸಿಗಳಿಗೆ ಬಿಪಿ, ಮಧುಮೇಹ, ಶ್ವಾಸಕೋಶ ಕಾಯಿಲೆಗಳು ಹಾಗೂ ಚರ್ಮರೋಗ ಬರಲಾರಂಭಿಸಿವೆ ಎಂದು ವಿವರಿಸಿದರು.
ಈ ವಿಚಾರದ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾ.ಪಂ. ಪಿಡಿಓ ಬಸವರಾಜು ಪರಿಸರ ಹಾನಿ ಸಂಬಂಧ ಕ್ರಮ ವಹಿಸದೆ, ಆಲೆಮನೆ ಮಾಲೀಕರ ಪರ ವಕಾಲತ್ತು ವಹಿಸುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದರು.