ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕರ್ನಾಟಕದ ಹಿತ ಕಾಪಾಡದ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮಂಡ್ಯನಗರದಲ್ಲಿ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಸೋಮವಾರವು ಮುಂದುವರಿಯಿತು.
24ನೇ ದಿನದ ಉಪವಾಸದಲ್ಲಿ ಮುಖಂಡರಾದ ಗಾಣದಾಳು ಚಂದ್ರಲಿಂಗು, ಗುನ್ನಾಯಕನಹಳ್ಳಿ ಜಯರಾಮು, ಸೊಳ್ಳೆಪುರ ಸೊ.ಶಿ. ಪ್ರಕಾಶ್, ಕುದರಗುಂಡಿ ಸಿ. ನಾಗರಾಜ್, ಕೋಣಸಾಲೆ ಕೆ.ಲಿಂಗಯ್ಯ, ದೇಶಹಳ್ಳಿ ವೆಂಕಟೇಶ್ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.
ಕಾವೇರಿಗಾಗಿ ರಾಜ್ಯದ ಎಲ್ಲಡೆ ಜನತೆ ಪ್ರತಿಭಟನೆ ಮಾಡಿದರೂ ಸಹ ರಾಜ್ಯ ಸರ್ಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿದೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಮುಂದಾದ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಯಿತು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಎಸ್.ನಾರಾಯಣ್, ಶಿವ ರತ್ನಮ್ಮ ನೇತೃತ್ವ ವಹಿಸಿದ್ದರು.