ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ 30 ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು.
ಇದೀಗ ರಾಜ್ಯಸಭೆಯಿಂದ ಕೂಡ 46 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಒಟ್ಟು 90 ಸಂದರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದ್ದು, ಲೋಕಸಭೆಯ ಇತಿಹಾಸದಲ್ಲೇ ಅಚ್ಚರಿಯ ಬೆಳವಣಿಗೆ ಎಂದು ಹೇಳಲಾಗಿದೆ. ಒಟ್ಟು 90 ಸಂಸದರ ಅಮಾನತನ್ನು ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ಸರ್ವಾಧಿಕಾರ ನಡೆ ಎಂದು ಖಂಡಿಸಿದೆ.
ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿದ 13 ವಿರೋಧ ಪಕ್ಷದ ಸಂಸದರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು. ಇದಲ್ಲದೆ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾತನಾಡುವಂತೆ ಪಟ್ಟು ಹಿಡಿದ 30 ಸಂಸದರನ್ನು ಅಮಾನತು ಮಾಡಲಾಗಿತ್ತು. ರಾಜ್ಯ ಸಭೆಯಲ್ಲೂ ಪ್ರತಿಪಕ್ಷಗಳ ಸಂಸದರು ಅಮಿತ್ ಶಾ ಹೇಳಿಕೆಗೆ ಪಟ್ಟು ಹಿಡಿದಿದ್ದು ರಾಜ್ಯ ಸಭೆಯಿಂದ ಕೂಡ 46 ಸಂಸದರನ್ನು ಅಮಾನತು ಮಾಡಲಾಗಿದೆ.
ರಾಜ್ಯಸಭೆಯಿಂದ ಕಾಂಗ್ರೆಸ್ನ ಜೈರಾಮ್ ರಮೇಶ್, ರಣದೀಪ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಸೇರಿ 46 ಸಂಸದರನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯಿಂದ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಉಪನಾಯಕ ಗೌರವ್ ಗೊಗೊಯ್, ತೃಣಮೂಲ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ, ಸತಾಬ್ದಿ ರಾಯ್ ಮತ್ತು ಡಿಎಂಕೆ ಸಂಸದರಾದ ಎ ರಾಜಾ ಮತ್ತು ದಯಾನಿಧಿ ಮಾರನ್ ಸೇರಿದ್ದಾರೆ.
ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಸರ್ಕಾರವು ಸರ್ವಾಧಿಕಾರದ ರೀತಿಯಲ್ಲಿ ವರ್ತಿಸುತ್ತಿದೆ ಮತ್ತು ಸಂಸತ್ತನ್ನು ಬಿಜೆಪಿ ಪ್ರಧಾನ ಕಚೇರಿಯಂತೆ ಪರಿಗಣಿಸುತ್ತಿದೆ. ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುತ್ತಿವೆ. ಆದರೆ ಸರಕಾರವು ಸರ್ವಾಧಿಕಾರದ ಉತ್ತುಂಗವನ್ನು ಮೀರಿದೆ. ಅವರಿಗೆ ಬಹುಮತವಿದೆ, ಅವರು ಅಧಿಕಾರವನ್ನು ಹಿಡಿದಿದ್ದಾರೆ. ಅವರು ಸಂಸತ್ತನ್ನು ಪಕ್ಷದ ಕಚೇರಿಯಂತೆ ನಡೆಸಲು ಬಯಸುತ್ತಾರೆ. ಆದರೆ ಅದು ಸಂಭವಿಸಬಾರದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಗೌರವ್ ಗೊಗೊಯ್, ಬಿಜೆಪಿ ಸರ್ಕಾರವು ಪ್ರತಿಪಕ್ಷಗಳನ್ನು ಕೆಡವಲು ಪ್ರಯತ್ನಿಸುತ್ತಿದೆ ಮತ್ತು ಗೃಹ ಸಚಿವರು ಭದ್ರತಾ ಲೋಪದ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಲೋಕಸಭೆಯ ಹೊರಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.