Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ದಾಳಿ| ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿಯ ಪುತ್ರ ಸೇರಿ ಇಬ್ಬರ ಬಂಧನ

ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು  ಕರ್ನಾಟಕದ ಬಾಗಲಕೋಟೆಯ ಮಾಜಿ ಪೊಲೀಸ್‌ ಅಧಿಕಾರಿಯೋರ್ವರ ಪುತ್ರ ಸೇರಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಂತಾಗಿದೆ.

ಸಂಸತ್ತಿನಲ್ಲಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಡಬ್ಬಗಳಿಂದ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮನೋರಂಜನ್ ಡಿ ಅವರ ಆತ್ಮೀಯ ಸ್ನೇಹಿತ ಮತ್ತು ಕರ್ನಾಟಕದ ಬಾಗಲಕೋಟೆಯ ಸಾಯಿಕೃಷ್ಣ ಮತ್ತು ಉತ್ತರಪ್ರದೇಶ ಮೂಲದ ಅತುಲ್ ಕುಲಶ್ರೇಷ್ಠ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಾಗಲಕೋಟೆಯ ಸಾಯಿಕೃಷ್ಣ ಕರ್ನಾಟಕದ ಬಾಗಲಕೋಟೆಯ ಮಾಜಿ ಡಿವೈಎಸ್‌ಪಿಯೋರ್ವರ ಪುತ್ರನಾಗಿದ್ದಾರೆ ಎನ್ನಲಾಗಿದೆ. ಈತನನ್ನು ನಿನ್ನೆ ರಾತ್ರಿ 10 ಗಂಟೆಗೆ ಬಾಗಲಕೋಟೆಯಲ್ಲಿರುವ ಆತನ ಮನೆಯಿಂದ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ರಾಷ್ಟ್ರ ರಾಜಧಾನಿಗೆ ಕರೆತರಲಾಗುತ್ತಿದೆ.

ಇದಲ್ಲದೆ ಉತ್ತರ ಪ್ರದೇಶದ ಜಲೌನ್‌ನ ಅತುಲ್ ಕುಲಶ್ರೇಷ್ಠ ಎಂಬಾತನಿಗೆ ಕೂಡ ಪೊಲೀಸರು ಬಂಧಿಸಿದ್ದಾರೆ. ‘ಬಚ್ಚಾ’ ಎಂದೂ ಕರೆಯಲ್ಪಡುವ ಅತುಲ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಮತ್ತು ಯಾವುದೇ ರಾಜಕೀಯ ಸಂಬಂಧವಿಲ್ಲ ಎನ್ನಲಾಗಿದೆ. ಆದರೆ ಆತ ಸಂಸತ್ತಿನ ಒಳನುಗ್ಗುವವರೊಂದಿಗೆ ಫೇಸ್‌ಬುಕ್‌ನಲ್ಲಿ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಡಿ.13ರಂದು ಸಂಸತ್ತಿನಲ್ಲಿ ಭಾರೀ ಭದ್ರತ ಲೋಪ ನಡೆದಿದ್ದವು. ಇಬ್ಬರು ಯುವಕರು ಸಂಸತ್ತಿನಲ್ಲಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಡಬ್ಬಗಳಿಂದ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಮಾಡಿ ಘೋಷಣೆಗಳನ್ನು ಕೂಗಿದರೆ ಇನ್ನಿಬ್ಬರು ಸಂಸತ್ತಿನ ಹೊರಗೆ ಗ್ಯಾಸ್‌ ಸ್ಪ್ರೇ ಮಾಡಿ ಸರ್ವಾಧಿಕಾರ, ನಿರುದ್ಯೋಗ, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಸಂಸತ್ತಿನ ಒಳಗೆ ಲಕ್ನೋದ ಸಾಗರ್ ಶರ್ಮಾ(26) ಮತ್ತು ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರ ಮನೋರಂಜನ್ ಡಿ(35) ಅವರನ್ನು ಬಂಧಿಸಲಾಗಿತ್ತು. ಸಂಸತ್ತಿನ ಹೊರಗೆ ಅಮೋಲ್ ಶಿಂಧೆ (25) ಮತ್ತು ನೀಲಮ್ ದೇವಿ (42) ಅವರನ್ನು ಬಂಧಿಸಲಾಗತ್ತು. ಇದಲ್ಲದೆ ಪ್ರಕರಣದಲ್ಲಿ ಸಹಕರಿಸಿದ ಆರೋಪದಲ್ಲಿ ವಿಶಾಲ್‌ ಶರ್ಮಾ, ಲಲಿತ್‌ ಝಾ ಸೇರಿ 6 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತ  ಆರು ಆರೋಪಿಗಳ ಪೈಕಿ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಇದಕ್ಕೂ ಮೊದಲು ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ಪೊಲೀಸರು ಮೈಸೂರಿಗೆ ಆಗಮಿಸಿದ್ದು, ಪ್ರಕರಣದ ಆರೋಪಿ ಮೈಸೂರು ನಿವಾಸಿ ಮನೋರಂಜನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯನಗರದ 2ನೇ ಹಂತದಲ್ಲಿರುವ ಮನೋರಂಜನ್ ಮನೆಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಪುಸ್ತಕ ಸೇರಿದಂತೆ ಮನೋರಂಜನ್ ಬಳಸುತ್ತಿದ್ದ ಕೆಲವು ವಸ್ತುಗಳನ್ನು ಪರಿಶೀಲಿಸಿದ್ದಾರೆ. ಇದಲ್ಲದೆ ಮನೋರಂಜನ್ ತಾಯಿ ಶೈಲಜಾ ಮತ್ತು ತಂದೆ ದೇವರಾಜೇಗೌಡ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗುಪ್ತಚರ ಇಲಾಖೆಯ ಅಧಿಕಾರಿಗಳು, ಮನೋರಂಜನ್ ಬ್ಯಾಂಕ್ ಖಾತೆ, ಆತನ ಫೋನ್‍ ಕರೆ ಡಿಟೇಲ್ಸ್ ಮತ್ತು ಆತನ ಕುಟುಂಬದ ಹಿನ್ನೆಲೆ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!